ಸೋಮವಾರ, ನವೆಂಬರ್ 16, 2015



ವಂಡರ್ ಹರ್ಬ್ ಸಂಜೀವಿನಿ
ರಾಮಾಯಣದಲ್ಲಿ ರಾವಣನ ಪುತ್ರ ಇಂದ್ರಜಿತನ ಅಸ್ತ್ರ ಪ್ರಹಾರಕ್ಕೆ ಲಕ್ಷ್ಮಣ ಮೂರ್ಛೆ ಹೋಗಿ ಸಾವಿನಂಚಿಗೆ ತಲುಪಿದಾಗ, 
ಲಕ್ಷ್ಮಣನನ್ನು  ಬದುಕಿಸಿದ್ದು ‘ಸಂಜೀವಿನಿ’ ಎಂಬ ಗಿಡಮೂಲಿಕೆ. ಅಂತಹದ್ದೊಂದು ಮೂಲಿಕೆ ಕಾಲ್ಪನಿಕ ಎನ್ನಲಾಗುತ್ತಿತ್ತು.
 ಇದೀಗ ಭಾರತೀಯ ವಿಜ್ಞಾನಿಗಳು ಹಿಮಾಲಯದ ಅತ್ಯಂತ ಎತ್ತರದ ಪ್ರದೇಶದಲ್ಲಿ ಅಪರೂಪದ ಮೂಲಿಕೆಯನ್ನು ಶೋಧಿಸಿದ್ದು, ಅದುವೇ ‘ಸಂಜೀವಿನಿ’ ಇರಬಹುದೆಂದು ನಂಬಲಾಗಿದೆ.
ಸದ್ಯಕ್ಕೆ ವಿಜ್ಞಾನಿಗಳು ಈ ಮೂಲಿಕೆಗೆ ‘ಅದ್ಭುತ ಮೂಲಿಕೆ’ ಅಥವಾ ‘ವಂಡರ್ ಹರ್ಬ್’ ಎಂದು ಹೆಸರಿಸಿದ್ದಾರೆ. ಹಿಮಾಲಯ  ಪರ್ವತದ ಅತ್ಯಂತ ಎತ್ತರದ ಪ್ರತಿಕೂಲ ಹಾಗೂ ಜೀವಿಸುವುದೇ ಕಷ್ಟವೆನಿಸುವ ಪ್ರದೇಶದಲ್ಲಿ ಈ ಮೂಲಿಕೆ ಪತ್ತೆಯಾಗಿದ್ದು, ರೋಗ ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ಪರ್ವತದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದರ ಜೊತೆಗೆ ವಿಕಿರಣದಿಂದ ದೇಹವನ್ನು ರಕ್ಷಿಸುವ ಗುಣವನ್ನೂ ಹೊಂದಿದೆ.
ಅತ್ಯಂತ ಎತ್ತರದ ಹಾಗೂ ಹಿಮಪ್ರದೇಶದಲ್ಲಿ ಇದನ್ನು ಪತ್ತೆ ಮಾಡುವ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಹುಡುಕಾಟದ ಸಂಜೀವಿನಿ ಮೂಲಿಕೆ ಇದೇ ಆಗಿರಬಹುದು ಎಂಬ ನಿರ್ಣಯಕ್ಕೆ ಬರಬೇಕಿದೆ. ಅದು ನಿಜವೇ ಆಗಿದ್ದಲ್ಲಿ, ಅವರ ಶೋಧಕ್ಕೆ ತೆರೆ ಬೀಳಲಿದೆ. ಲಡಾಖ್‌ನಲ್ಲಿ ಸ್ಥಳೀಯರು ಈ ಮೂಲಿಕೆಗೆ ‘ಸೋಲೊ’ ಎಂದು ಕರೆಯುತ್ತಾರೆ. ಈ ಮೂಲಿಕೆಯ ಔಷಧೀಯ ಗುಣಗಳು ಇನ್ನಷ್ಟೆ ಬೆಳಕಿಗೆ ಬರಬೇಕು. ಸ್ಥಳೀಯರು ಈ ಸಸ್ಯದ ಎಲೆಗಳನ್ನು ಸೊಪ್ಪಿನಂತೆ ಆಹಾರದ ಜತೆ ಸೇವಿಸುತ್ತಾರೆ.
ಲೇಹ್‌ನ ‘ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್’ ಈ ಮೂಲಿಕೆಯ ಔಷಧೀಯ ಗುಣಗಳನ್ನು ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದೆ. ಅಷ್ಟೇ ಅಲ್ಲ ಹಿಮಾಲಯದ ಅತ್ಯಂತ ಎತ್ತರದ ಸೇನಾ ನೆಲೆ ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿನ ಯೋಧರ ಸೇವನೆಗೆ ನೀಡಲಾಗುತ್ತಿದೆ. ಇದು ಉತ್ತಮ ಪರಿಣಾಮ ಬೀರಿದೆ.
ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್‌ನ ನಿರ್ದೇಶಕ ಆರ್.ಬಿ.ಶ್ರೀವಾಸ್ತವ ಅವರ ಪ್ರಕಾರ, ಈ ಅದ್ಭುತ ಗಿಡಮೂಲಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಹವಾಮಾನದ ಪ್ರದೇಶದಲ್ಲಾದರೂ ಹೊಂದಿಕೊಳ್ಳಲು 
ಸಾಧ್ಯವಿದೆ ಮತ್ತು ವಿಕಿರಣದಿಂದ ರಕ್ಷಣೆಯನ್ನು ಪಡೆಯಬಹುದಾಗಿದೆ. ಈ ಸಸ್ಯದಲ್ಲಿ ಉಪಾಪಚಯಕ (ಮೆಟಬೊಲೈಟೀಸ್) ಮತ್ತು ಸಸ್ಯಜನ್ಯ ಅಂಶಗಳು ವಿಶಿಷ್ಟವಾದವು.
ಈ ಸಸ್ಯದ ಇನ್ನೂ ವಿಶೇಷವೆಂದರೆ, ಜೀವರಸಾಯನಿಕ ಅಸ್ತ್ರಗಳು ಮತ್ತು ಸ್ಫೋಟಕಗಳಲ್ಲಿ ಇರುವ ಗ್ಯಾಮ ವಿಕಿರಣದ ಪರಿಣಾಮವನ್ನು ಮೂಲಿಕೆ  ಶಮನಗೊಳಿಸುತ್ತದೆ. ಮೂಲಿಕೆಯ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಪ್ರಚಾರಕ್ಕಾಗಿ ಸಂಘಟನಾ ಪ್ರಯತ್ನ ಹಾಕಬೇಕು. ಹಿಮಾಲಯದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಇದರಿಂದ ಬಹಳಷ್ಟು ಪ್ರಯೋಜವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಿಕೆಯ ಬಗ್ಗೆ  ಕಳೆದೊಂದು ದಶಕದಿಂದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಲೇಹ್ ಸಸ್ಯ, ಪ್ರಾಣಿ ಸಂಶೋಧನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಈ ಮೂಲಿಕೆಯ ಹೊಂದಾಣಿಕೆ ಗುಣದಿಂದಾಗಿ ಯೋಧರು  ಅತ್ಯಂತ ಕಡಿಮೆ ಒತ್ತಡ ಮತ್ತು ಕಡಿಮೆ ಆಮ್ಲಜನಕದ ಪರಿಸರದಲ್ಲೂ ಹೊಂದಣಿಕೆ ಮಾಡಿಕೊಳ್ಳಬಲ್ಲರು. ಅಷ್ಟೇ ಅಲ್ಲ, ಖಿನ್ನತೆ ನಿರೋಧಕ ಮತ್ತು ಹಸಿವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಖಿನ್ನತೆ ಆವರಿಸುವುದು ಸಹಜ. ಕಾರಣ, ಅಲ್ಲಿ ಎಲ್ಲೆಲ್ಲೂ ಮಂಜು, ಭೂಮಿಯೂ ಬರಡು ಮತ್ತು ದೂರ ದೃಷ್ಟಿ ಹಾಯಿಸಿದಷ್ಟೂ ದೂರ ಬಿಳಿ ಬಣ್ಣವೇ ಕಾಣುತ್ತದೆ. ಹೀಗಾಗೆ ಯೋಧರು ಖಿನ್ನತೆಗೆ  ಒಳಗಾಗುತ್ತಾರೆ. ಇಲ್ಲಿನ ವಾತವಾರಣದಿಂದ ಹಸಿವೂ ಕಡಿಮೆ ಆಗುತ್ತದೆ. ಈ ಮೂಲಿಕೆಯನ್ನು ಬಳಸಿ ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್ ಸಂಸ್ಥೆ ಔಷಧವನ್ನು ತಯಾರಿಸಿ ಸಿಯಾಚಿನ್‌ನಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ನೀಡುತ್ತಿದೆ. ಇದರಿಂದಾಗುವ ಪರಿಣಾಮದ ಬಗ್ಗೆ  ಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಮೂಲಿಕೆಯನ್ನು ಚೀನಾದ ಸಾಂಪ್ರದಾಯಿಕ ಔಷಧಿಯಲ್ಲಿ ಎತ್ತರ ಪ್ರದೇಶದ ಅಸ್ವಸ್ಥತೆಯನ್ನು ನಿವಾರಿಸಲು ಬಳಸಿದರೆ, ಮಂಗೋಲಿಯಾದ ವೈದ್ಯರು ಕ್ಷಯ ಮತ್ತು ಕ್ಯಾನ್ಸರ್ ಕಾಯಿಲೆಗೆ ಈ ಮೂಲಿಕೆ ಔಷಧವನ್ನು ಸೇವಿಸಲು ಸಲಹೆ ನೀಡುತ್ತಾರೆ. ರಷ್ಯಾದಲ್ಲಿ ಅಥ್ಲೀಟ್‌ಗಳು ಮತ್ತು ಗಗನಯಾತ್ರಿಗಳಿಗೆ ಇದೇ ಬಗೆಯ ಗಿಡಮೂಲಿಕೆಯ ಔಷಧವನ್ನು ನೀಡಿ ಅದರ ಪರಿಣಾಮವನ್ನು ಅಧ್ಯಯನ ನಡೆಸಲಾಗುತ್ತಿದೆ. ಈ ಸಸ್ಯದಲ್ಲಿರಬಹುದಾದ ಇತರ ಗುಣಗಳ ಬಗ್ಗೆ ಅದರಲ್ಲೂ ನೆನಪಿನ ಶಕ್ತಿ ವೃದ್ಧಿ ಮತ್ತು ಹೃದಯದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ವಿಶ್ವದ ಹಲವೆಡೆ ನಡೆಸಲಾಗುತ್ತಿದೆ.
 
ಈ ಮೂಲಿಕೆಯನ್ನು ಸೇವಿಸುವುದರಿಂದ ಮುಪ್ಪನ್ನು ಮುಂದುಡಬಹುದು, ದೇಹದ ಕೋಶಗಳನ್ನು ಪುನುರುಜ್ಜೀವನಗೊಳಿಸಬಹುದು. ಆಮ್ಲಜನಕದ ಕೊರತೆ ಇರುವ ಸಂದರ್ಭದಲ್ಲೂ ನ್ಯೂರಾನ್‌ಗಳನ್ನು ರಕ್ಷಿಸುತ್ತದೆ ಹಾಗೂ  ಅರಿವಿನ ಪ್ರಮಾಣವೂ ಉತ್ತಮಗೊಳ್ಳುತ್ತದೆ.
-ಸುನೀಲ್ ಹೋಟ, ಸಂಶೋಧಕ

* ಇದರ ಜೀನ್ ಬ್ಯಾಂಕ್ ಸ್ಥಾಪಿಸಲಾಗಿದೆ. ಪ್ರಯೋಗಾಲಯದ ಎರಡು ಎಕರೆ ಜಾಗದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ. ಈ ಸಸ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದ್ದೇವೆ.
-  ಓ.ಪಿ.ಚೌರಾಸಿಯಾ, ಸಸ್ಯ ವಿಜ್ಞಾನಿ

ಗುರುವಾರ, ನವೆಂಬರ್ 12, 2015


ಕಾಲಗರ್ಭದಿಂದ ಹೊರಬಂತು ವಾನರ ದೇವತಾ ನಗರಿ

* ಸೇನೆಯೊಂದಿಗೆ  ಮೊದಲ ಬಾರಿ ಕಾಲಿಟ್ಟ ಸಂಶೋಧಕರ ತಂಡ
* ಹೊಂಡುರಾಸ್ ಜಾನಪದ ಕಥೆಗಳಲ್ಲಿ ಉಲ್ಲೇಖವಾಗಿದ್ದ ಪ್ರಾಚೀನ ಪಟ್ಟಣ
*‘ಹನುಮಂತ’ ಪೂಜಿಸಲ್ಪಡುತ್ತಿದ್ದ ಸಂಸ್ಕೃತಿ
*ಲೂಟಿಕೋರರಿಂದ ರಕ್ಷಿಸಲು ನಗರವಿದ್ದ ಸ್ಥಳ ಇನ್ನೂ ಗೌಪ್ಯ


ತಂಡವು ಹಾರೆ-ಪಿಕಾಸು, ಕತ್ತಿಗಳನ್ನು, ಕ್ಯಾಮರಾ ಹಿಡಿದು ಶಸ್ತ್ರಧಾರಿ ಸೈನಿಕರ ಜತೆ ಹೊರಟಿದ್ದು, ಅತ್ಯಂತ ನಿಗೂಢ, ವಿಸ್ಮಯಕಾರಿ ತಾಣಕ್ಕೆ. ಸಾವಿರಾರು ವರ್ಷಗಳ ಅವಧಿಯಲ್ಲಿ ಬೆರಳೆಣಿಕೆಯಷ್ಟು ಆಧುನಿಕ ಜನ ಇಲ್ಲಿಗೆ ಕಾಲಿಟ್ಟಿರಬಹುದಷ್ಟೆ. ಮಾನವ ಪ್ರವೇಶವೇ ಕಷ್ಟ ಎಂಬಂತಿರುವ ದಟ್ಟ ಕಾನನ. ‘ಶ್ವೇತ ನಗರಿ’, ‘ವಾನರ ದೇವನ ನಗರಿ’ ಎಂದೂ ಇಲ್ಲಿನ ಅಜ್ಜಿ ಕಥೆಗಳಲ್ಲಿ ಈ ಸ್ಥಳ ಉಲ್ಲೇಖಿತಗೊಂಡಿದೆ. ಅಂದ ಹಾಗೆ, ಈ ಕಥೆಯ ಹಾಗೂ ನಿಗೂಢ ತಾಣ ಇರುವುದು ಭಾರತದಲ್ಲಿ ಅಲ್ಲ. ಹೊಂಡುರಾಸ್ ದಟ್ಟಡವಿಯಲ್ಲಿ. ಇದು ಸೆಂಟ್ರಲ್ ಅಮೆರಿಕದಲ್ಲಿ ಗ್ವಾಟೆಮಾಲಕ್ಕೆ ಹೊಂದಿಕೊಂಡಂತಿದೆ.
ವಾನರ ದೇವತೆ ಅಥವಾ ಹನುಮಂತ ಸಹಸ್ರಾರು ವರ್ಷಗಳ ಹಿಂದೆ ಭಾರತದಿಂದ ಆಚೆಗೂ ಪೂಜಿತಗೊಂಡಿದ್ದ ನಗರವಿದು. ಮೊದಲ ಬಾರಿಗೆ ಸಂಶೋಧಕರ ತಂಡವು ಕಾಲನ ತುಳಿತಕ್ಕೆ ಹುದುಗಿ ಹೋಗಿದ್ದ ನಗರವನ್ನು ಬೆಳಕಿಗೆ ತಂದಿದೆ. ‘ಹೊಂಡುರಾಸ್ ನಾಗರಿಕತೆ’ ಎಂದೇ ಕರೆಯಲ್ಪಡುವ ನಿಗೂಢ ಸಂಸ್ಕೃತಿಗಳ ನಗರ ಅಷ್ಟೇ ನಿಗೂಢವಾಗಿ ಅವನತಿ ಹೊಂದಿತ್ತು. ಆ ಕುರಿತು ಅಜ್ಜಿ ಕಥೆಗಳನ್ನು ಬಿಟ್ಟರೆ ಬೇರೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಅಜ್ಜಿ ಕಥೆ ಎಂದು ನಿರ್ಲಕ್ಷಿಸದೆ, ಪಟ್ಟು ಬಿಡದ ಶೋಧಕರ ತಂಡವು ಬೆನ್ನು ಹಿಡಿದು ಹೋದ ಪರಿಣಾಮ ಅಂತಿಮವಾಗಿ ಈ ನಗರಿ ಸಿಕ್ಕಿದೆ!
ಇಲ್ಲಿ ಹೊಂಡುರಾಸ್ ನಾಗರಿಕತೆಗೆ ಸಂಬಂಧಿಸಿದ ಪೇಟೆ ಬೀದಿ, ಮಾನವ ನಿರ್ಮಿತ ದಿಬ್ಬ, ಪಿರಮಿಡ್ ಪತ್ತೆ ಮಾಡಲಾಗಿದೆ. ಅವು ಅನೇಕ ಸಹಸ್ರಮಾನಗಳಿಗಿಂತ ಹಳೆಯವು. ಪುರಾತತ್ತ್ವಜ್ಞರು ಅಷ್ಟೂ ಪ್ರದೇಶಗಳ ನಕಾಶೆ ರೂಪಿಸಿದ್ದಾರೆ. ಶೋಧಕ ತಂಡವು ಕಳೆದ ಬುಧವಾರವಷ್ಟೇ ಪ್ರಾಚೀನ ನಾಗರಿಕತೆಯ ಸ್ಥಳದಿಂದ ಹಿಂದಕ್ಕೆ ಬಂದಿದೆ. ಇವೆಲ್ಲದರ ಮಧ್ಯೆ ಆ ತಂಡವು ಭೂಮಿಯಲ್ಲಿ ಹುಗಿದು ಹೋಗಿದ್ದ ಅತ್ಯಪೂರ್ವ ಶಿಲ್ಪವೊಂದನ್ನು ಶೋಧಿಸಿದೆ. ಈ ನಗರ ಇದಕ್ಕಿದ್ದಂತೆ ಅವನತಿ ಹೊಂದಿ, ಪರಿತ್ಯಕ್ತಗೊಂಡ ಬಳಿಕ ಯಾರೂ ಸ್ಪರ್ಶಿಸಿರಲಿಲ್ಲ.
ಈ ಪ್ರದೇಶವು ಮಾಯ ನಾಗರಿಕತೆ ಅಭಿವೃದ್ಧಿಗೊಂಡಿದ್ದ ತಾಣಕ್ಕೆ ಸಮೀಪವಿದ್ದರೂ ಬೆಳಕಿಗೆ ಬಾರದಿದ್ದದ್ದು ವಿಶೇಷ. ಇಲ್ಲಿ ಇನ್ನೂ ಏನೇನು ಇವೆ ಎಂಬುದು ಗೊತ್ತಿಲ್ಲ. ಅಧ್ಯಯನ ಮುಂದುವರಿಯಬೇಕಷ್ಟೆ. ಅಷ್ಟೇ ಅಲ್ಲ, ಇದಕ್ಕೆ ಏನು ಹೆಸರಿಡಬೇಕು ಎಂಬುದೇ ಪುರಾತತ್ತ್ವಜ್ಞರಿಗೆ ಹೊಳೆಯುತ್ತಿಲ್ಲ!
ಹೊಂಡುರಾಸ್ ಇರುವುದು ಸೆಂಟ್ರಲ್ ಅಮೆರಿಕದಲ್ಲಿ. ಇದರ ಒಂದು ಬದಿ ಗ್ವಾಟೆಮಾಲ, ಮತ್ತೊಂದು ಕಡೆ ಎಲ್ ಸಾಲ್ವಡಾರ್ ಮತ್ತು ನಿಕಾರಗುವಾ ಸುತ್ತುವರಿದಿವೆ. ಕೊಲೊರಾಡೊ ಸ್ಟೇಟ್ ವಿಶ್ವವಿದ್ಯಾಲಯದ ಮೆಸೊ ಅಮೆರಿಕನ್ ಪುರಾತತ್ತ್ವಜ್ಞ ಕ್ರಿಸ್ಟೋಫರ್ ಫಿಷರ್ ಪ್ರಕಾರ, ಇಂತಹದ್ದೊಂದು ನಾಗರಿಕತೆಯ ತಾಣ ಇನ್ನೂ ಮೂಲರೂಪದಲ್ಲೇ ಇದೆ. ಲೂಟಿ ಮಾಡಿದ ಯಾವುದೇ ಕುರುಹೂ ಇಲ್ಲ. ನಿಜಕ್ಕೂ ನಂಬುವುದಕ್ಕೂ ಕಷ್ಟವೆನಿಸುವಷ್ಟು ಅಪೂರ್ವವಾದುದು. ಪಿರಮಿಡ್ ಅಡಿ ಭಾಗದಲ್ಲಿ ಮಾನವ ನಿರ್ಮಿತ ಸಾಧನಗಳು ಸಿಕ್ಕಿವೆ. ಪ್ರಾಯಶಃ ಇಲ್ಲಿ ಧಾರ್ಮಿಕ ಕ್ರಿಯಾ ವಿಧಾನಗಳು ನಡೆಯಲು ಬಳಸುತ್ತಿದ್ದ ಅಥವಾ ಬಲಿ ಇತ್ಯಾದಿಯ ಜಾಗವೂ ಆಗಿರಬಹುದು.
Copan, Honduras: ಮಾನವ ನಿರ್ಮಿತ ಸಾಧನ, ಸಲಕರಣೆಗಳನ್ನು ಭೂಮಿಯಿಂದ ಹೊರ ತೆಗೆಯಲಾಗಿದೆ. ಸಮಾಧಿ ಬಳಸಿದ ಸಾಧನ, ಉತ್ಸವಾಚರಣೆಯ ಕಲ್ಲಿನ ವೇದಿಕೆ, ಅಂದವಾದ ಕೆತ್ತನೆ ಹೊಂದಿರುವ ಪಾತ್ರೆಗಳು, ಅವುಗಳಲ್ಲಿ ಕೆಲವು ಪಾತ್ರೆಗಳಲ್ಲಿ ಹಾವು, ಮೃಗರೂಪದ ಪ್ರಾಣಿಗಳು, ಹದ್ದುಗಳ ಕೆತ್ತನೆಗಳನ್ನು ಕಾಣಬಹುದಾಗಿದೆ.
ಸಂಶೋಧಕರ ತಂಡ ಇಲ್ಲಿ ಮತ್ತಷ್ಟು ಜಾಲಾಡಿದಾಗ ಸಿಕ್ಕಿದ್ದು ಒಂದು ಕಲ್ಲಿನ ತಲೆ ಬುರುಡೆ, ಅದು ‘ಜಾಗ್ವಾರ್’(ಕಪ್ಪು ಬಣ್ಣದ ಚಿರತೆ ಜಾತಿಯ ಪ್ರಾಣಿ) ಹೋಲುತ್ತದೆ. ಒಂದೋ ಇದನ್ನು ಅಂದಿನ ಮಾಂತ್ರಿಕರು ತಾಂತ್ರಿಕ ಕ್ರಿಯೆಗಳಿಗೆ ಬಳಸುತ್ತಿದ್ದಿರಬಹುದು. ಇಲ್ಲವೇ, ಧಾರ್ಮಿಕ ಕ್ರಿಯಾ ಆಟಗಳಲ್ಲಿ ಬಳಸಲ್ಪಡುತ್ತಿದ್ದುದಾಗಿರಬಹುದು. ರುಂಡದ ಆಕೃತಿ ಶಿರಸ್ತ್ರಾಣ ಧರಿಸಿದಂತೆ ತೋರುತ್ತದೆ ಎಂದು ಫಿಷರ್ ಅಭಿಪ್ರಾಯಪಟ್ಟಿದ್ದಾರೆ. 
ಹೊಂಡುರಾಸ್ ಇನ್ಸ್‌ಟಿಟ್ಯೂಟ್ ಆಫ್ ಆಂಥ್ರಪಾಲಜಿ ವಿಭಾಗದ ಪುರಾತತ್ವ್ತಜ್ಞ ಆಸ್ಕರ್ ನೀಲ್ ಕ್ರುಝ್ ತರ್ಕವೆಂದರೆ, ಈ ಸಾಧನಗಳು ಕ್ರಿ.ಶ. 1000 ದಿಂದ 1400 ರ ಅವಧಿಯದ್ದಾಗಿರಬಹುದು. ಸಂಶೋಧಕರು ಅಲ್ಲಿ ಸಿಕ್ಕ ವಸ್ತುಗಳನ್ನು ದಾಖಲೀಕರಣ ಮಾಡಿದ್ದು, ಯಾವುದೇ ಉತ್ಖನನ ಕಾರ್ಯಕ್ಕೆ ಕೈ ಹಾಕಲಿಲ್ಲ. ಲೂಟಿಕೋರರಿಂದ ತಾಣವನ್ನು ರಕ್ಷಿಸಲು ಈ ಪ್ರಾಚೀನ ಈ ತಾಣ ಎಲ್ಲಿದೆ ಎಂಬುದನ್ನು ರಹಸ್ಯವಾಗಿಡಲಾಗಿದೆ.
ಕಥೆಗಳ ಆಗರ:
ಈ ಪ್ರದೇಶದ ಬಗ್ಗೆ ವರ್ಣರಂಜಿತ ಕಥೆಗಳಿವೆ. ಮೊದಲಿಗೆ ಇದನ್ನು ಪತ್ತೆ ಮಾಡಿದ್ದು 2012ರಲ್ಲಿ. ಲಾಮಾಸ್ಕಿಟಾ ಕಣಿವೆಯ ಮೇಲೆ ವೈಮಾನಿಕ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅವಶೇಷಗಳು ಗೋಚರಕ್ಕೆ ಬಂದವು. ಇಲ್ಲಿ ವಿಶಾಲ ಜೌಗು ಪ್ರದೇಶ ಕಂಡುಬಂದಿತು. ನದಿಗಳು, ಪರ್ವತಗಳಿದ್ದವು. ಆವರೆಗೆ ಈ ಪ್ರದೇಶವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿರಲಿಲ್ಲ. ಆದರೆ, ನೂರಾರು ವರ್ಷಗಳಿಂದ ಇಲ್ಲೊಂದು ಅಳಿದು ಹೋದ ನಗರಿಯ ಶ್ವೇತ ವರ್ಣದ ಕೋಟೆ ಇದೆ, ಶ್ವೇತ ಮಹಲು ಇದೆ. ಇಲ್ಲಿ ವಾನರ ದೇವತೆಯನ್ನು ಪೂಜಿಸುತ್ತಾರೆ ಇತ್ಯಾದಿ ಕಥೆಗಳಿದ್ದವು. ಈಡನ್‌ನಂತಹ ಸ್ವರ್ಗ ಸದೃಶ ತಾಣವದು. ಸ್ಪಾೃನಿಷ್ ಆಕ್ರಮಣಕಾರರಿಂದ ತಪ್ಪಿಸಿಕೊಂಡ ಇಂಡಿಯನ್ ಎಂದೇ ಕರೆಯಲ್ಪಡುವ ಅಮೆರಿಕದ ಮೂಲನಿವಾಸಿ ಇಲ್ಲಿ ರಕ್ಷಣೆ ಪಡೆದಿರಬಹುದು. ಇದೊಂದು ಅತೀಂದ್ರಿಯ(ಮಿಸ್ಟಿಕಲ್) ಜಾಗ್ರತವಾಗಿರುವ ಪ್ರದೇಶವೂ ಹೌದೆನ್ನಲಾಗಿದೆ.

ಹಿಂದಿನ ಶೋಧನೆಗಳು:
1920ರವರೆಗೆ ಹಲವು ಸಾಹಸಿ ಶೋಧಕರು ಶ್ವೇತ ನಗರಿ ಹುಡುಕಿಕೊಂಡು ಹೋಗಿದ್ದರೂ ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿರಲಿಲ್ಲ. ಅದಾಗಿ 20 ವರ್ಷಗಳ ಬಳಿಕ, 1940ರಲ್ಲಿ ಥಿಯೊಡೊರ್ ಮೊರ್ಡೆ ಈ ನಗರಕ್ಕೆ ಹೋಗಿ ಸಾವಿರಾರು ಪ್ರಾಚೀನ ಸಾಧನಗಳೊಂದಿಗೆ ಮರಳಿದ್ದಾಗಿ ಹೇಳಿಕೊಂಡಿದ್ದರು. ಆಗ ಸ್ಥಳೀಯ ಜನರ ಜತೆ ಮಾತನಾಡಿದಾಗ, ಇಲ್ಲೊಂದು ಬೃಹತ್ ವಾನರ ದೇವತೆಯ ಪ್ರತಿಮೆ ಹುಗಿದು ಹೋಗಿದೆ ಎಂದು ಹೇಳಿದ್ದರು. ಆದರೆ, ಆತ ನಗರ ಇರುವ ಜಾಗ ಯಾವುದು ಎಂಬುದರ ಮಾಹಿತಿ ನೀಡಲು ನಿರಾಕರಿಸಿದ್ದರು. ಇದಕ್ಕೆ ಕಾರಣ ಲೂಟಿಕೋರರು ದಾಳಿ ಮಾಡಿ ವಸ್ತುಗಳನ್ನು ಕೊಳ್ಳೆ ಹೊಡೆಯಬಹುದು ಎಂಬ ಭಯಕ್ಕೆ ಹೇಳಲಿಲ್ಲ. ಆ ಬಳಿಕ ಅವರು ಅತ್ಯಂತ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರೊಂದಿಗೆ ಆ ಮಾಹಿತಿಯೂ ಅಳಿದು ಹೋಯಿತು. ವಾನರ ದೇವತಾ ಮೂರ್ತಿ ಇರುವ ಜಾಗ ಯಾವುದು ಎಂಬುದು ಯಾರಿಗೂ ತಿಳಿಯಲೇ ಇಲ್ಲ.


----------------------
* ಇತ್ತೀಚೆಗೆ, ಸಾಕ್ಷೃಚಿತ್ರಗಳ ನಿರ್ಮಾತೃಗಳಾದ ಸ್ಟೀವ್ ಎಲ್ಕಿನ್ಸ್ ಮತ್ತು ಬಿಲ್ ಬೆನ್ನೆನ್‌ಸನ್ ಅವರು ಅಳಿದು ಹೋದ ನಗರದ ಪತ್ತೆ ಕಾರ್ಯದಲ್ಲಿ ತೊಡಗಿದರು. ಅಗ್ನಿಮುಖ ಪರ್ವತದ ಬಾಯಿಯಂತಹ ಕಣಿವೆಯನ್ನು ಕಂಡು ಹಿಡಿದರು. ಇದರ ಸುತ್ತಲೂ ಕಡಿದಾದ ಪರ್ವತಗಳಿದ್ದವು. ಇದೇ ಸ್ಥಳ ಎಂಬುದು ಅವರಿಗೆ ಮನದಟ್ಟಾಯಿತು.

ಶುಕ್ರವಾರ, ಅಕ್ಟೋಬರ್ 30, 2015



ಸ್ವರ್ಗದ ಬಾಗಿಲು

ಸ್ವರ್ಗ ಮತ್ತು ನರಕದ ಬಗ್ಗೆ ಚರ್ಚೆಗಳು ಸಾಮಾನ್ಯ.
 ಜಗತ್ತಿನಲ್ಲಿ  ಈ ವಿಷಯಗಳ ಬಗ್ಗೆ  ವಿಚಾರ ಮಂಥನ ನಡೆಯುತ್ತಲೇ ಇರುತ್ತದೆ.
 ಒಮ್ಮೆ ಜಪಾನಿನಲ್ಲಿ  ಇಬ್ಬರ ನಡುವೆ ಇಂತಹುದೇ ಚರ್ಚೆ ಆರಂಭವಾಗುತ್ತದೆ.
 ನೊಬುಷಿಗೆ ಎಂಬ ಸೈನಿಕ  ಹಕೂಯಿನ್ ಎಂಬ ಸಾಮಾನ್ಯ ರೈತನ ಬಳಿ ಬರುತ್ತಾನೆ. 
"ನಿಜಕ್ಕೂ ಸ್ವರ್ಗ ಮತ್ತು ನರಕ ಎಂಬುದಿದೆಯೇ?" ಎಂದು ನೊಬುಷಿಗೆ ಕೇಳುತ್ತಾನೆ.
ಅದಕ್ಕೆ ಹಕೂಯಿನ್, ‘ನೀನ್ಯಾರು’ ಎಂದು ಪ್ರಶ್ನಿಸುತ್ತಾನೆ.
‘ನಾನು ಸಮುರಾಯ್’(ಯೋಧ) ಎಂದು ನೊಬುಷಿಗೆ ಉತ್ತರಿಸುತ್ತಾನೆ.
‘ನೀನೊಬ್ಬ ಸೈನಿಕನೇ’ ಎಂಬ ಉದ್ಘಾರ ಹಕೂಯಿನ್‌ನಿಂದ ಹೊರಡುತ್ತದೆ. 
 ಅಷ್ಟಕ್ಕೆ ನಿಲ್ಲಿಸದ ಆತ, ‘ನಿನ್ನ ರಾಜ ಎಂಥವನು ನಿನ್ನಂತಹವನನ್ನು ರಕ್ಷಣಾಭಟನನ್ನಾಗಿ ಇಟ್ಟುಕೊಂಡಿದ್ದಾನೆ. ನಿನ್ನ ಮುಖ ನೋಡಿದರೆ ಭಿಕ್ಷುಕನ ಹಾಗೆ ಕಾಣಿಸುತ್ತದೆಯಲ್ಲ’ ಎಂದು ಮಾತಿನಿಂದ ತಿವಿದ. 
ಈ ಮಾತುಗಳನ್ನು ಕೇಳುತ್ತಿದ್ದಂತೆ ನೊಬುಷಿಗೆಗೆ ನಖ- ಶಿಖಾಂತ ಸಿಟ್ಟು ಬರುತ್ತದೆ. ಕೂಡಲೇ ಖಡ್ಗವನ್ನು ಹಿರಿದು ನಿಲ್ಲುತ್ತಾನೆ.
 ‘ಓಹ್ ನಿನ್ನ ಬಳಿ ಖಡ್ಗ ಇದೆಯೇ? ನಿನ್ನ ಖಡ್ಗ ಮೊಂಡಾಗಿದೆ ಅಂತ ಕಾಣುತ್ತೆ. ಅದು ನನ್ನ ಕತ್ತನ್ನು ಕತ್ತರಿಸಲಾರದು’ ಎಂದು ಹಕೂಯಿನ್ ಮತ್ತೆ ಕೆಣಕುತ್ತಾನೆ. ನೊಬುಷಿಗೆ ಮತ್ತೆ ಸಿಟ್ಟಾಗಿ ಖಡ್ಗ ಎಳೆಯುತ್ತಿದ್ದಂತೆ, ಹಕೂಯಿನ್ ಹೇಳುತ್ತಾನೆ, ‘ನೋಡು...ನೋಡು ನರಕದ ಬಾಗಿಲು ತೆರೆಯಿತು’ ಎನ್ನುತ್ತಾನೆ. 
ಈ ಮಾತು ಕೇಳುತ್ತಿದ್ದಂತೆ ಯೋಧನ ಮನಸ್ಸಿನಲ್ಲಿ ಮಿಂಚೊಂದು ಹೊಳೆದಂತಾಗುತ್ತದೆ. 
ತನ್ನ ಗುರುವಿನ ಆದೇಶ ನೆನಪಿಗೆ ಬಂದು ಶಿಸ್ತಿನಿಂದ ನಿಲ್ಲುತ್ತಾನೆ. ಖಡ್ಗವನ್ನು ಒರೆಯೊಳಗೆ ಇರಿಸಿ, ಬಳಿಕ ನಡುಬಾಗಿಸಿ ನಿಲ್ಲುತ್ತಾನೆ.
 'ನೋಡು ಈಗ ಸ್ವರ್ಗದ ಬಾಗಿಲು ತೆರೆಯಿತು' ಎಂದು ಹೇಳುತ್ತಾನೆ ಹಕೂಯಿನ್. ಕಥೆ ಅಲ್ಲಿಗೆ ಪೂರ್ಣಗೊಳ್ಳುತ್ತದೆ.
 ಈ ಪುಟ್ಟ ಝೆನ್ ಕಥೆಯನ್ನು ಹಲವು ಬಾರಿ ಕೇಳಿರಲಿಕ್ಕೂ ಸಾಕು. ಆದರೆ, ಇದರ ಅರ್ಥ ಮತ್ತು ಉದ್ದೇಶ ಬಹಳ ವಿಶಾಲವಾದುದು. ಇದು ನಮ್ಮ ಆಂತರ್ಯವನ್ನು ಶೋಧಿಸುವ ಮತ್ತು  ವ್ಯಕ್ತಿತ್ವವನ್ನು ಆಮೂಲಾಗ್ರ ಬದಲಾವಣೆ ಮಾಡಬಹುದಾದ ಶಕ್ತಿ ಇರುವ ಒಂದು ಕಥೆ.
 ಕೆಲವು ಸಂದರ್ಭದಲ್ಲಿ ದೊಡ್ಡವರಿರಲಿ, ಮಕ್ಕಳಿರಲಿ ಪೂರ್ವಪರ ಆಲೋಚಿಸದೇ ಕೆಲವು ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅದರಿಂದ ಆಗುವ ಹಾನಿಯೇ ಹೆಚ್ಚು. ಇದಕ್ಕೆ ಸಿಟ್ಟು, ಸೆಡವು, ಆತುರವೇ ಕಾರಣ. ವಿವೇಕ- ವಿವೇಚನೆ ಬಳಸದೇ ವರ್ತಿಸುತ್ತಾರೆ.
 ಅದಕ್ಕೊಂದು ನಿದರ್ಶನ -  ಒಬ್ಬ ಬಾಲಕಿಗೆ ಮರುದಿನ  ಶಾಲಾ ಪರೀಕ್ಷೆ ಇರುತ್ತದೆ. ಆದರೆ, ತಯಾರಿ ಮಾಡಿಕೊಂಡಿರುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಇದ್ದಕ್ಕಿದ್ದಂತೆ ಒತ್ತಡಕ್ಕೆ ಒಳಗಾಗಿ, ನಾನು ನಾಳೆ ಪರೀಕ್ಷೆಗೆ ಕೂರುವುದಿಲ್ಲ.  ನಾನು ಹೆಚ್ಚು ಅಂಕಗಳಿಸಲು ಆಗಲ್ಲ. ಯಾವಾಗಲೂ ಚೆನ್ನಾಗಿ ಅಂಕ ತೆಗೆಯುತ್ತಿದ್ದ  ನಾನು ಕಡಿಮೆ ಅಂಕ ತೆಗೆದರೆ ಸಹಪಾಠಿಗಳು ಆಡಿಕೊಳ್ಳುತ್ತಾರೆ ಎಂದು ತನ್ನ ತಂದೆ ಬಳಿ ಹೇಳಿಕೊಂಡಳು. ಅವಳ ಮನಸ್ಥಿತಿ ಅರ್ಥೈಸಿದ ಅಪ್ಪ, ಕೆಲವು ಧೈರ್ಯ ತುಂಬುವ ಮಾತುಗಳನ್ನು ಆಡಿ, ಆಕೆಯ ಜತೆ ಕುಳಿತು, ಪರೀಕ್ಷೆಗೆ ತಯಾರಿ ಮಾಡಿಸುತ್ತಾನೆ. ಲಭ್ಯವಿದ್ದ ಸಮಯದಲ್ಲಿ ಮಾಡಿ ತೋರಿಸುತ್ತಾನೆ. ಬಾಲಕಿ ಪರೀಕ್ಷೆಗೆ ಸಂಪೂರ್ಣ ತಯಾರಾಗುತ್ತಾಳೆ. ಮನಸ್ಸಿನ ದುಗುಡ ಮಾಯವಾಗುತ್ತದೆ.  ಸ್ವರ್ಗದ ಬಾಗಿಲು ತೆರೆಯುವುದು ಎಂದರೆ ಹೀಗೆ ಅಲ್ಲವೆ?

ಶುಕ್ರವಾರ, ಅಕ್ಟೋಬರ್ 23, 2015

ಆನಂದ- ದುಃಖ  ಯಾವುದು ಬೇಕು?
ಒಬ್ಬ ಸೂಫಿ ಸಂತನಿದ್ದ. ಆತ ಜೀವವಿಡೀ ನಗುತ್ತಾ, ಸಂತೋಷದಿಂದಲೇ ಕಳೆದಿದ್ದ. ಅವನೆಂದೂ ಅಸಂತೋಷಗೊಂಡಿದ್ದನ್ನು ಆ ಊರಿನಲ್ಲಿ ಯಾರೂ ಆವರೆಗೆ ನೋಡಿರಲಿಲ್ಲ. ಸದಾ ನಗು- ನಗುತ್ತಲೇ ಇರುತ್ತಿದ್ದ; ಅದರಲ್ಲೇ ಆನಂದ ಕಂಡುಕೊಂಡಿದ್ದ. ಹೀಗೆ ಇರುತ್ತಾ ಹಣ್ಣು ಹಣ್ಣು ಮುದುಕನಾಗಿ ಸಾವಿನ ಸನಿಹಕ್ಕೆ ತಲುಪಿದ. ಇನ್ನೇನು ಪ್ರಾಣ ಪಕ್ಷಿ ಹಾರಿಹೋಗಬೇಕು ಎನ್ನುವ ಸಂದರ್ಭದಲ್ಲೂ ಅವನ ಮುಖದಲ್ಲಿನ ನಗು ಮಾಸಿರಲಿಲ್ಲ. ಸಾವನ್ನು ನಗು- ನಗುತ್ತಲೇ ಸ್ವೀಕರಿಸಲು ಸಿದ್ಧನಾಗಿದ್ದ. ಇವೆಲ್ಲ ಸಂತನ ಶಿಷ್ಯರಿಗೆ ಅಚ್ಚರಿ ಎನಿಸಿತು. ಇದೇನಿದು ಸಾವಿನ ಮನೆಯ ಹೊಸ್ತಿಲಲ್ಲಿದ್ದರೂ ಆನಂದ ಮತ್ತು ಸಂತಸದಲ್ಲಿದ್ದಾನಲ್ಲ ಎಂದೆನಿಸಿತು. ಗುರು ಸಾವಿನ ಸಮೀಪವಾಗಿರುವುದು ಕಂಡು ದುಃಖಿತರಾಗಿದ್ದ ಶಿಷ್ಯರು ಹೀಗೆಂದು ಪ್ರಶ್ನಿಸಿದರು, ಅಲ್ಲ ಗುರುಗಳೇ, ನೀವೊಂದು ರೀತಿ ಒಗಟಾಗಿದ್ದೀರಿ. ನೀವೀಗ ಸಾಯುತ್ತಿದ್ದೀರಿ, ಆದರೂ ನಗುತ್ತಿದ್ದೀರಲ್ಲ? ಅಂತಹದ್ದೇನಿದೆ ನಗಲು. ನಾವೆಲ್ಲ ದುಃಖಿತರಾಗಿದ್ದೇವೆ. ನಿಮಗೇನು ಅನ್ನಿಸುತ್ತಿಲ್ಲವೆ? ಜೀವನದಲ್ಲಿ ಒಮ್ಮೆಯೂ ಬೇಸರ ಆಗಿಲ್ಲವೆ, ಯಾಕೆ ದುಃಖಿರಾಗಿಲ್ಲ ಎನ್ನೋದನ್ನು ಕೇಳಬೇಕೆಂದು ಸಾಕಷ್ಟು ಸಲ ಅನ್ನಿಸಿತ್ತು. ಈಗ ನೀವು ಸಾವಿನ ಸಮ್ಮುಖದಲ್ಲಿದ್ದೀರಿ, ಇಂತಹ  ಸಂದರ್ಭದಲ್ಲಿ ಯಾರಿಗಾದರೂ ದುಃಖ ಆಗಲೇಬೇಕು. ಆದರೆ, ನೀವು ನಗುತ್ತಲೇ ಇದ್ದೀರಿ. ಇವೆಲ್ಲ ಹೇಗೆ ಸಾಧ್ಯವಾಯ್ತು? 
ಈ ಪ್ರಶ್ನೆಗಳ ಸುರಿಮಳೆಗೆ ಮುದುಕ ಉತ್ತರ ಕೊಟ್ಟ, ಇದು ಸರಳ, ನಾನು ಯುವಕನಾಗಿದ್ದಾಗ ನನ್ನ ಗುರುಗಳ ಬಳಿಗೆ ಹೋಗಿದ್ದೆ.  ನನಗೆ 17 ರ ಪ್ರಾಯ ಅಂತ ಕಾಣುತ್ತೆ, ಜೀವನ ಬಹಳ ಬೇಸರ ಹುಟ್ಟಿಸಿತ್ತು. ನನ್ನ ಗುರುಗಳು ಜೀವನದ ಸಂಧ್ಯಾಕಾಲದಲ್ಲಿದ್ದರು. ಅವರು ಒಂದು ಮರದ ಕೆಳಗೆ ಕುಳಿತ್ತಿದ್ದರು. ಯಾವುದೇ ಕಾರಣ, ಪ್ರೇರಣೆ ಇಲ್ಲದೆ ನಗುತ್ತಲಿದ್ದರು. ಅಲ್ಲಿ ಏನೂ ಘಟಿಸಿರಲಿಲ್ಲ. ಯಾರೊಬ್ಬರೂ ಇರಲಿಲ್ಲ, ನಗುವಂತಹ ಸಂಗತಿಗೆ ಸ್ಫೂರ್ತಿ ನೀಡುವಂತಹದ್ದೂ ಏನೂ ಇರಲಿಲ್ಲ ಆದರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರು. ನನಗೆ ತಡೆಯಲಾಗಲಿಲ್ಲ ಕೇಳಿಯೇ ಬಿಟ್ಟೆ, ‘ನಿಮಗೇನಾಗಿದೆ, ಹುಚ್ಚು- ಗಿಚ್ಚು ಹಿಡಿದಿದೆಯೇ?’. ಅದಕ್ಕೆ ಅವರು ಉತ್ತರಿಸಿದರು, ಒಂದೊಮ್ಮೆ ನಿನ್ನ ಹಾಗೆಯೇ ನಾನೂ ಬೇಸರ, ದುಃಖಭರಿತನಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯಿತು ಅದೇನೆಂದರೆ, ಇದು ನನ್ನ ಜೀವನ ಮತ್ತು ನನ್ನ ಆಯ್ಕೆ, ನಾನೇಕೆ ಬೇಸರದಿಂದ ಇರಬೇಕು? ಅವತ್ತಿನಿಂದ ಪ್ರತಿ ಬೆಳಿಗ್ಗೆ ನಾನು ಎದ್ದ ತಕ್ಷಣ ಕಣ್ಣು ಬಿಡುವುದಕ್ಕೆ ಮುಂಚೆ ನನ್ನಷ್ಟಕ್ಕೆ ನಾನು ‘‘ಅಬ್ದುಲ್ಲಾ’’ ಎಂದು ಹೇಳಿಕೊಳ್ಳುತ್ತೇನೆ. ಅದು ಆ ಮುದುಕನ ಹೆಸರಾಗಿತ್ತು. ಹಾಗೆ ಹೇಳಿಕೊಳ್ಳುವಾಗ ನಿನಗೇನು ಬೇಕು? ದುಃಖವೇ? ಆನಂದವೇ? ಇವೆರಡರಲ್ಲಿ ನೀನ್ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀಯ? ಸಹಜವಾಗಿ ನಾನು ಆನಂದವಾಗಿರುವುದನ್ನು ಆಯ್ಕೆ  ಮಾಡಿಕೊಳ್ಳಲಾರಂಭಿಸಿದೆ ಎಂದರು. ನೀನು ಹೇಗಿರಬೇಕು ಎಂಬುದು ನಿನ್ನ ಆಯ್ಕೆ, ಪ್ರಯತ್ನಿಸು. ನಿದ್ದೆಯಿಂದ ಎದ್ದಾಕ್ಷಣ ಸ್ವಯಂ ಅರಿವಿನ ಅನುಭವ ಆದೊಡನೆ, ನಿನ್ನಲ್ಲೇ ಕೇಳಿಕೋ, ‘ಅಬ್ದುಲ್ಲಾ, ಇನ್ನೊಂದು ದಿನ, ನಿನ್ನ ಕಲ್ಪನೆ ಏನು? ನೀನು ದುಃಖವನ್ನು ಆಯ್ದುಕೊಳ್ಳುತ್ತೀಯೋ ಇಲ್ಲ ಆನಂದವನ್ನೊ?’. ಯಾರು ತಾನೆ ದುಃಖವನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ? ಏತಕ್ಕಾಗಿ? ದುಃಖದಲ್ಲೂ ಆನಂದದ ಸ್ಥಿತಿ ಅನುಭವಿಸಲು ಸಾಧ್ಯವಾಗದಿದ್ದಲ್ಲಿ ಅಸ್ವಾಭಾವಿಕ ಎನಿಸುತ್ತದೆ. ಆಗಲೂ ಆನಂದವನ್ನೇ ಆಯ್ಕೆ ಮಾಡುತ್ತೀರಿಯೇ ಹೊರತು ದುಃಖವನ್ನಲ್ಲ.
ಬದುಕಿನ ಮಹಾಗುರು ಶ್ರೀಕೃಷ್ಣ
-----------
ಕೃಷ್ಣ ಅಂದ್ರೆ ಖುಷಿ
----------
ಕ್ಕಳು ಮತ್ತು ಯುವ ಜನತೆ, ಮಹಿಳೆಯರೆನ್ನದೆ ಎಲ್ಲರನ್ನೂ ಗಾಢವಾಗಿ ಪ್ರಭಾವಿಸುವ ವ್ಯಕ್ತಿತ್ವ ಎಂದರೆ ಶ್ರೀಕೃಷ್ಣನದ್ದು. ಆತನ ಬಾಲ್ಯಲೀಲೆ, ಯೌವ್ವನದ ಸಾಹಸಕ್ಕೆ  ಮರುಳಾಗದವರು ಯಾರು? ಕೃಷ್ಣನ ಬಾಲ್ಯ, ಯೌವ್ವನ, ಆನಂತರದ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಅನುಕರಣೀಯ. ಸಾಹಸ, ಸ್ನೇಹ, ಶಿಕ್ಷಣ, ಸ್ಫೂರ್ತಿಯುತ ಜೀವನ ಪ್ರೀತಿ, ಮಹಾಭಾರತದ ಸಂದರ್ಭದ ರಾಜನೀತಿ, ಗೀತೆಯ ಬೋಧನೆಗಳೆಲ್ಲ ಇಂದಿಗೂ ಅನುಕರಣೀಯ. ಕೃಷ್ಣನಿಂದ ಸ್ಫೂರ್ತಿ ಪಡೆದವರು, ಪಡೆಯುತ್ತಿರುವವರು ಭಾರತೀಯರು ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲೂ ಇದ್ದಾರೆ. ಎಲ್ಲರನ್ನೂ ಸೆಳೆದುಕೊಳ್ಳುವ ವ್ಯಕ್ತಿತ್ವ ಆತನದ್ದು. ದೈವತ್ವವನ್ನು ಹೊರತುಪಡಿಸಿ ನೋಡಿದರೂ, ಸಾಧಾರಣ ಮಾನವನಾಗಿ ಆತ ಜಗತ್ತಿಗೆ ತೋರಿಸಿದ ದಾರಿದೀಪ ಯುಗಯುಗ  ಕಳೆದರೂ ಬೆಳಗುತ್ತಲೇ ಇರುವುದು. 

ಕೃಷ್ಣ ಅಂದ್ರೆ ಸ್ಫೂರ್ತಿ

ಶ್ರೀಕೃಷ್ಣನ ಅವತಾರವೇ ಒಂದು ಸ್ಫೂರ್ತಿ. ಧರೆಯಲ್ಲಿ ರಾಕ್ಷಸಿ ವ್ಯಕ್ತಿತ್ವ, ಗುಣಗಳ ವಿಜೃಂಭಣೆಯ ಕಾಲಘಟ್ಟದಲ್ಲಿ ಕೃಷ್ಣನ ಜನನ. ಈತನ ಜನನದ ಸಮಾಚಾರವೇ ಮಾವ ಕಂಸನಲ್ಲಿ ನಡುಕ ಹುಟ್ಟಿಸಿತ್ತು. ಎಳೆವೆಯಲ್ಲೇ ಹೊಸಕಿ ಹಾಕಲು ಬಹಳಷ್ಟು ಪ್ರಯತ್ನಪಟ್ಟ. ಆದರೆ ಅದು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಬೃಂದಾವನ, ಗೋಕುಲ ಎಲ್ಲೆಲ್ಲಿ ಕೃಷ್ಣ ಇದ್ದನೋ ಅಲ್ಲಿ ಸ್ಫೂರ್ತಿಯ ಚಿಲುಮೆ ಚಿಮ್ಮುತ್ತಿತ್ತು. ಕಂಸ ಮತ್ತು ಆತನ ಸಹಚರರ ಭೀತಿಯ ವಾತಾವರಣದ ಮಧ್ಯೆಯೂ ಕೃಷ್ಣನ ನಿರ್ಭೀತಿ, ನ್ಯಾಯಪರತೆ, ದುಷ್ಟರಿಗೆ ಶಿಕ್ಷೆ ಇವೆಲ್ಲಕ್ಕಿಂತ ಮಿಗಿಲಾಗಿ ಚೇತೋಹಾರಿ ಬದುಕು ಮನಕುಲಕ್ಕೆ ಸ್ಫೂರ್ತಿ. ಜೀವನದ ಉದ್ದಕ್ಕೂ ಆತ ಹಲವರಿಗೆ ಸ್ಫೂರ್ತಿಯಾಗುತ್ತಲೇ ನಡೆದ. ವಿರೋಧಿಗಳೆನಿಸಿಕೊಂಡವರು ಕೂಡ ಕೃಷ್ಣನನ್ನು ಮನದಲ್ಲೇ ನಮಿಸುವಷ್ಟು, ಭಜಿಸುವಷ್ಟು ಸ್ಫೂರ್ತಿಯನ್ನು ನೀಡಿದ್ದ. ಪಾಂಡವರಲ್ಲದೆ, ಭೀಷ್ಮ, ದ್ರೋಣ, ಸಂಜಯ ಮುಂತಾದವರು ವಿರೋಧ ಪಾಳೆಯದಲ್ಲಿದ್ದರೂ, ಅವರ ಮನಸ್ಸಿನಲ್ಲಿ ಕೃಷ್ಣನೇ ಮೂಡುತ್ತಿದ್ದ. ಬೃಂದಾವನವೆಂಬ ಇಡೀ ಹಳ್ಳಿಯ ಜನರನ್ನು ಪ್ರಭಾವಿಸಿದ್ದ. ಮಕ್ಕಳು -ದೊಡ್ಡವರು, ಹೆಂಗಸರು- ಗಂಡಸರು ಎಂಬ ತಾರತಮ್ಯವಿರಲಿಲ್ಲ. ನಡೆ, ನುಡಿ, ಆಚಾರ, ಆಚರಣೆ ಎಲ್ಲದರಲ್ಲೂ ಉನ್ನತ ಮೌಲ್ಯ ತುಂಬಿರುತ್ತಿತ್ತು. ದೋಷಗಳಿಗೆ ಎಡೆಯೇ ಇರುತ್ತಿರಲಿಲ್ಲ. ಆ ಸ್ಫೂರ್ತಿ, ಆದರ್ಶ ಅಂದಿಗೆ ಮಾತ್ರವಲ್ಲ ಇಂದಿನ ಪೀಳಿಗೆಗೂ ಸಕಾಲಿಕ. ಇಂದಿಗೂ ಪ್ರತಿ ಅಮ್ಮ ತನ್ನ ಮಗನನ್ನು ಒಂದಲ್ಲ ಒಂದು ಬಾರಿ ಕೃಷ್ಣನಿಗೆ ಹೋಲಿಸುತ್ತಾಳೆ. ಮಗನಲ್ಲಿ ಕೃಷ್ಣನನ್ನು ಕಾಣುವ ತಾಯಿಯ ಸಂಭ್ರಮ ಯಾವ ಸ್ಫೂರ್ತಿಗೂ ಕಡಿಮೆಯಲ್ಲ. 

ಗೆಳೆಯ ಅಂದ್ರೆ ಹೀಗಿರ‌್ಬೇಕು

ಶ್ರೀಕೃಷ್ಣನ ಬಾಲ್ಯದ ಕಥೆ ಬಹಳ ರೋಚಕ. ಕೃಷ್ಣನ ಕಥೆಯ ಮುಂದೆ ಹ್ಯಾರಿಪಾಟರ್ ಕಥೆಯೂ ಸಪ್ಪೆ. ಈ ಕಥೆಗಳಲ್ಲಿ ವಿಶೇಷವಾಗಿ ಗೆಳೆತನದ ಎಳೆಯೂ ಬರುತ್ತದೆ. ಬಾಲ್ಯದಲ್ಲಂತೂ ಸ್ನೇಹಿತರ ಹಿಂಡನ್ನು ಕಟ್ಟಿಕೊಂಡೇ ಓಡಾಡುವ ಕೃಷ್ಣ ಮುಂದೆ ದ್ವಾರಕಾಧೀಶನಾದ ಬಳಿಕವೂ ಬಾಲ್ಯದ ಗೆಳೆಯರನ್ನು ಮರೆಯುವುದಿಲ್ಲ. ಅದಕ್ಕೆ ಇಂದಿಗೂ ಜನಪ್ರಿಯವಾಗಿರುವ ಕಥೆ ಎಂದರೆ ಕೃಷ್ಣ- ಕುಚೇಲರದ್ದು. ಸ್ನೇಹಿತರೆಂದರೆ ಹೇಗಿರಬೇಕು? ಕೃಷ್ಣ- ಕುಚೇಲರ ಹಾಗಿರಬೇಕು ಎಂಬ ಮಾತೇ ಬೆಳೆದು ಬಂದಿದೆ. ಕುಚೇಲನನ್ನು ಸುದಾಮ ಎಂದೂ ಕರೆಯುತ್ತಾರೆ. ಶ್ರೀಕೃಷ್ಣ ಗುರು ಸಾಂದೀಪಿನಿಯ ಬಳಿ ವಿದ್ಯೆ ಕಲಿಯುವಾಗ ಸುದಾಮ ಆತನ ಸಹಪಾಠಿ. ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ದೊಡ್ಡ ರಾಜನ ಮಗ ಆಗಲಿ, ಬಡವರ ಮಕ್ಕಳಾಗಲಿ ಗುರುಕುಲದಲ್ಲಿಯೇ ಕಲಿಯಬೇಕಿತ್ತು. ಬಡವ- ಧನಿಕ ಎಂಬ ವ್ಯತ್ಯಾಸ ಇರುತ್ತಿರಲಿಲ್ಲ. ಆಟ, ಊಟ, ಪಾಠದ ಜೊತೆಗೆ ಸಮಾನ ಗುಣ, ಸಮಾನ ಅಭಿರುಚಿಯಿಂದ ಕೃಷ್ಣ-ಸುದಾಮರ ಮಧ್ಯೆ ಗಾಢ ಸ್ನೇಹ. ಗುರುಕುಲ ವಾಸ ಮುಗಿಸಿ ಹೊರಡುವಾಗ ‘ಬದುಕಿರುವವರೆಗೂ ಸ್ನೇಹ ಮರೆಯದೇ ಇರೋಣ’ ಎಂಬುದಾಗಿ ಮಾತನಾಡಿಕೊಂಡರು. ಸುದಾಮ ಘನ ಪಂಡಿತನಾದರೂ ಕಡು ಬಡತನದ ಜೀವನ  ಸಾಗಿಸುತ್ತಿದ್ದ. ಒಮ್ಮೆ ಹೆಂಡತಿ ‘ಕೃಷ್ಣ ಅಷ್ಟು ಗೆಳೆಯ ಎನ್ನುತ್ತೀರಲ್ಲ, ನಮ್ಮ ಕಷ್ಟ ನಿವಾರಿಸಿಕೊಳ್ಳಲು ಆತನ ಬಳಿ ಹೋಗಿ’ ಎಂದು ತಾಕೀತು ಮಾಡುತ್ತಾಳೆ. ಗೆಳೆಯನ ಬಳಿ ಹೋಗುವಾಗ ಬರಿಗೈಲಿ ಹೋಗಬಾರದು ಎಂದು ಒಂದು ಹಿಡಿ ಅವಲಕ್ಕಿಯನ್ನು ಅವಳು ಕಳಿಸುತ್ತಾಳೆ. ಹರುಕು ಪಂಚೆಯಲ್ಲೇ ಅವಲಕ್ಕಿ  ಕಟ್ಟಿಕೊಂಡು ಬರುತ್ತಾನೆ ಸುದಾಮ. ಹಾಗೆ ಬಂದ ಗೆಳೆಯನನ್ನು ದೂರದಿಂದಲೇ ಗುರುತಿಸಿ, ರುಕ್ಮಿಣಿಯೊಂದಿಗೆ ಒಡಗೂಡಿ ಬಂದು ಆದರಿಸಿ, ಬರಮಾಡಿಕೊಂಡು ಸತ್ಕರಿಸುತ್ತಾನೆ ಕೃಷ್ಣ. ಗೆಳೆಯನನ್ನು ತಬ್ಬಿಕೊಂಡು ಕುಣಿದಾಡುತ್ತಾನೆ. ಈ ಕಥೆ ಇಂದಿಗೂ ಜನಪ್ರಿಯ.

ಕೃಷ್ಣನೆಂಬ ಗುರು

ಯಾರು ಅರಿವನ್ನು ಮೂಡಿಸುತ್ತಾರೋ ಅವರೇ ಗುರು. ಕೃಷ್ಣ ಮನುಕುಲಕ್ಕೆ ಬೆಳಕು ನೀಡಿದ ಮಹಾನ್ ಗುರು. ಮಾನವನ ಆಂತರಿಕ ಮತ್ತು ಬಾಹ್ಯದ ದೋಷವೆಂಬ ಮಲಿನವನ್ನು ತೊಳೆದು ಸ್ವಚ್ಛಗೊಳಿಸಲು ಗೀತಾಮೃತಕ್ಕಿಂತ ಮಿಗಿಲಾದ ಬೇರೊಂದು ಟಾನಿಕ್ ಬೇಕಿಲ್ಲ. ಅದೇ ಕಾರಣಕ್ಕೆ, ಕೆಲವು ಶಿಕ್ಷಣ ಸಂಸ್ಥೆಗಳು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಂಥ ದಿಗ್ಗಜ ಸಂಸ್ಥೆಗಳೂ ಭಗವದ್ಗೀತೆಯನ್ನು ಪಠ್ಯವಾಗಿ ಬೋಧಿಸುತ್ತಿವೆ. ಮಾನಸಿಕ ತಾಕಲಾಟಗಳಿಂದ ಹೊರಬರಲು ಅತ್ಯುತ್ತಮ ಮನೋವೈಜ್ಞಾನಿಕ ವಿಶ್ಲೇಷಣೆಯುಳ್ಳ ಗ್ರಂಥವೂ ಇದಾಗಿದೆ. ಹೀಗಾಗಿ ಐನ್‌ಸ್ಟೀನ್‌ರಂತಹ ಮಹಾ ವಿಜ್ಞಾನಿಗಳೂ ಗೀತೆಗೆ ಶರಣೆಂದಿದ್ದಾರೆ. 


ಜೀವನ ಸಂದೇಶಕ್ಕೆ ಸಾಟಿಯಿಲ್ಲ:

ಜೀವನದ ಕುರಿತು ಕೃಷ್ಣ ನೀಡಿರುವ ಸಂದೇಶವನ್ನು  ಪ್ರತಿ ನಿತ್ಯ ಓದುವುದರಿಂದ ಎಲ್ಲಾ ಬಗೆಯ ಆತಂಕ, ಸಂಕಷ್ಟ ಮತ್ತು ಗೊಂದಲಗಳಿಂದ ಮುಕ್ತಿ ಪಡೆಯಬಹುದು. ಜೀವನವನ್ನು ಪ್ರೀತಿಸಬಹುದು. ನಿರ್ಭಯರಾಗಿ ಬದುಕಬಹುದು.

ಜೀವನ ಎಂದರೇನು?

------------
ಜೀವನವೆಂದರೆ ಪ್ರತಿಭೆ- ಅದನ್ನು ಪರಿಪೂರ್ಣಗೊಳಿಸು
ಜೀವನವೆಂದರೆ ಉಡುಗೊರೆ- ಅದನ್ನು ಸ್ವೀಕರಿಸು
ಜೀವನವೆಂದರೆ ಸಾಹಸ-  ಮುನ್ನುಗ್ಗಿ ಸಾಧಿಸು
ಜೀವನವೆಂದರೆ ದುಃಖ- ಅದನ್ನು ನಿವಾರಿಸಿಕೊಳ್ಳು
ಜೀವನವೆಂದರೆ ದುರಂತ- ಅದನ್ನು ಎದುರಿಸು
ಜೀವನವೆಂದರೆ ಕರ್ತವ್ಯ- ಅದನ್ನು ನಿರ್ವಹಿಸು
ಜೀವನವೆಂಬುದು ಆಟ- ಅದನ್ನು ಚೆನ್ನಾಗಿ ಆಡು
ಜೀವನವೆಂಬುದು ರಹಸ್ಯ- ಅದನ್ನು ಅನಾವರಣಗೊಳಿಸು
ಜೀವನವೆಂಬುದು ಅವಕಾಶ- ಅದನ್ನು ಬಳಸಿಕೊಳ್ಳು
ಜೀವನವೆಂಬುದು ಪಯಣ- ಅದನ್ನು ಪೂರ್ಣಗೊಳಿಸು
ಜೀವನವೆಂಬುದು ವಾಗ್ದಾನ- ಅದನ್ನು ಈಡೇರಿಸು
ಜೀವನವೆಂಬುದು ಪ್ರೀತಿ- ಅದನ್ನು ಅನುಭವಿಸು
ಜೀವನವೆಂಬುದು ಸ್ಫೂರ್ತಿ- ಅದನ್ನು ಅರಿತುಕೋ
ಜೀವನವೆಂಬುದು ಸಂಕಷ್ಟ- ಅದರ ವಿರುದ್ಧ ಹೋರಾಡು
ಜೀವನವೆಂಬುದು ಒಗಟು- ಅದನ್ನು ಬಿಡಿಸು
ಜೀವನ ಎಂಬುದು ಗುರಿ- ಅದನ್ನು ಸಾಧಿಸು.

ಬುಧವಾರ, ಅಕ್ಟೋಬರ್ 21, 2015

ಸಾವಿರ ವರ್ಷದ ಧ್ಯಾನಸ್ಥ ಸ್ಥಿತಿಯ ಗುರುವಿನ ‘ಮಮ್ಮಿ’
ಪ್ರತಿಮೆಯೊಳಗೆ ಬೌದ್ಧ ಗುರು
ಸಾವಿರ ವರ್ಷಗಳ ಹಿಂದಿನ ಬೌದ್ಧ ಸನ್ಯಾಸಿ ಪ್ರತಿಮೆ ರೂಪಕ್ಕಿಳಿದ ರೋಚಕ ಕಥೆ ಇದು.  ಗಾಢ ಮತ್ತು ಉನ್ನತ ಧ್ಯಾನಸ್ಥ ಸ್ಥಿತಿಯ ಸನ್ಯಾಸಿ ಬುದ್ಧನ ವಿಗ್ರಹದಲ್ಲಿ ಸೇರಿಕೊಂಡಿದ್ದಾದರೂ  ಹೇಗೆ? ಪ್ರತಿಮೆ ರೂಪದಲ್ಲಿ ಮಮ್ಮಿಕರಣಗೊಂಡಿದ್ದಾದರೂ ಹೇಗೆ? ಇಂತಹ ಹಲವು ಪ್ರಶ್ನೆಗೆಳಿಗೆ ಈಗ ಉತ್ತರ ಸಿಕ್ಕಿದೆ. ಆಧುನಿಕ ಸಿ.ಟಿ ಸ್ಕ್ಯಾನ್  ಬೌದ್ಧ ಸನ್ಯಾಸಿಯ ಮಮ್ಮಿಯ ಹಲವು ರಹಸ್ಯಗಳನ್ನು ಅನಾವರಣಗೊಳಿಸಿದೆ.
ಈ ಪ್ರತಿಮೆ ಚೀನಾದ್ದು. ಹಾಲೆಂಡ್, ಜರ್ಮನಿ, ಸ್ವಿರ್ಜಲೆಂಡ್ ಮತ್ತು ಹಂಗೆರಿ ದೇಶಗಳಲ್ಲಿ ಜಂಟಿ ಪ್ರದರ್ಶನಕ್ಕೆಂದು ಒಯ್ಯಲಾಗಿತ್ತು. 
ಮಮ್ಮಿ ಎಂದು ಗೊತ್ತಾಗುತ್ತಿದ್ದಂತೆ ತಜ್ಞರು ಸಿ.ಟಿ  ಸ್ಕ್ಯಾನ್  ಮತ್ತು ಎಂಡೋಸ್ಕೊಪಿಗೊಳಪಡಿಸಿದರು. ಈ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ, ಇದರ  ದರ್ಶನಕ್ಕಾಗಿ  ಜನ ಮುಗಿ ಬಿದ್ದರು . 2014 ರಲ್ಲಿ  ಹಾಲೆಂಡ್‌ನ ಡೆರೆಂಟ್ ಮ್ಯೂಸಿಯಂನಲ್ಲಿ ಏಳು ತಿಂಗಳ ಪ್ರದರ್ಶನದ ಬಳಿಕ ತಜ್ಞರು ಪ್ರತಿಮೆಯೊಳಗೆ ಹುದುಗಿದ್ದ  ಸನ್ಯಾಸಿಯ ದೇಹದೊಳಗಿನ ಅಂಗಾಂಗಗಳನ್ನು  ವಿಶ್ಲೇಷಣೆಗೊಳಪಡಿಸಲು ನಿರ್ಧರಿಸಿದರು.
ಸಿ.ಟಿ  ಸ್ಕ್ಯಾನ್  ಮಾಡಿದಾಗ ತಜ್ಞರಿಗೆ ಅಚ್ಚರಿ ಕಾದಿತ್ತು. ದೇಹದೊಳಗೆ ಹಲವು ಅಂಗಗಳೇ ಇರಲ್ಲಿಲ್ಲ .
ಅಷ್ಟಕ್ಕೂ  ಸ್ಕ್ಯಾನ್ ಗೆ ಮುಂದಾಗಿದ್ದು ಬೇರೆಯೇ  ಕಾರಣಕ್ಕೆ  ಪ್ರತಿಮೆಯ ಮಾಲಿಕ ಅದರ ಆಳೆತ್ತರದ ಪ್ರತಿಮೆ ಪುನರ್ ನಿರ್ಮಿಸಲು ನಿರ್ಧರಿಸಿದ್ದ.   
ಇದರ ಒಳ ರಚನೆ ಪುನರ್ ಸೃಷ್ಟಿಗೆ  3ಡಿ  ಸ್ಕ್ಯಾನ್   ಮಾಡಬೇಕಾಯಿತು. ಆಗ ಮಮ್ಮಿಯೊಳಗಿನ ಮಾನವಾಕೃತಿ ಇರುವುದು ಬೆಳಕಿಗೆ ಬಂದಿತು. 1996 ರಲ್ಲಿ ಪ್ರತಿಮೆಯನ್ನು ಚೀನಾದಿಂದ ತಂದಾಗ ಅದು ಮಮ್ಮಿ ಎಂಬುದು ಯಾರಿಗೂ  ಗೊತ್ತಿರಲಿಲ್ಲ. ಹಲವು ವರ್ಷಗಳ ಬಳಿಕ ತಜ್ಞರು ಪ್ರತಿಮೆಯನ್ನು ಸಂರಕ್ಷಿಸುವ ಸಂದರ್ಭದಲ್ಲಿ ಮಮ್ಮಿ ಇರಬಹುದು ಎಂಬುದಾಗಿ ಊಹಿಸಿದ್ದರು. ಪರೀಕ್ಷೆಗೆ ಹೋಗಿರಲಿಲ್ಲ . ಸಿಟಿ ಸ್ಕ್ಯಾನ್  ಬಳಿಕ ಹಾಲೆಂಡ್‌ನ ಮಿಯಾಂಡೆರ್ ಮೆಡಿಕಲ್ ಸೆಂಟರ್‌ನಲ್ಲಿ ಕಳೆದ ವರ್ಷ ಮಮ್ಮಿಯೊಳಗೆ ಪುಟಾಣಿ ಕ್ಯಾಮೆರಾ ತೂರಿಸಿ ಎಂಡೋಸ್ಕೋಪಿ ಪರೀಕ್ಷೆಯನ್ನೂ ನಡೆಸಲಾಯಿತು. ಶ್ವಾಸಕೋಶದ ಭಾಗಕ್ಕೆ ಕ್ಯಾಮೆರಾ ತೆರಳಿ ಚಿತ್ರ ಬಿತ್ತರಿಸಿದಾಗ ಅದನ್ನು ಶ್ವಾಸಕೋಶದ ಅಂಗಾಂಶ ಇರಬಹುದೆಂದು ಭಾವಿಸಲಾಗಿತ್ತು. ಆದರೆ, ಅದು ಅಂಗಾಂಶ ಆಗಿರದೇ, ಚೀನಿ ಬರಹವನ್ನು ಒಳಗೊಂಡ ಸಣ್ಣ ಕಾಗದದ ತುಣುಕುಗಳಾಗಿದ್ದವು.  
ಈ ಪ್ರತಿಮೆಯಲ್ಲಿನ ಸನ್ಯಾಸಿಯ ದೇಹದ ಕುರಿತು ಇನ್ನಷ್ಟು ತನಿಖೆಗಳು ನಡೆಯುತ್ತಿವೆ. ಡಿಎನ್‌ಎ ಪರೀಕ್ಷೆಯೂ ನಡೆಯಲಿದೆ.  2013 ರಲ್ಲಿ ಜರ್ಮನಿಯ ಮನ್ನಿಹೆಮ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಸ್ಕ್ಯಾನ್ ಮಾಡಲಾಗಿತ್ತು.  ಮಮ್ಮೀಕೃತ ಬೌದ್ಧ ಸನ್ಯಾಸಿಯ ದೇಹ ಚೀನಿ ಧ್ಯಾನ ಶಾಲೆಯ ಗುರುವಾಗಿದ್ದ, ಲಿಕ್ವಾನ್ ನದ್ದು ಎಂದು ಭಾವಿಸಲಾಗಿದೆ. ಈತ  ಕ್ರಿ.ಶ 1100 ರ ಅವಧಿಯಲ್ಲಿ ಗಾಢ ಧ್ಯಾನದ ಸ್ಥಿತಿಯಲ್ಲೇ ದೇಹ ತ್ಯಾಗ ಮಾಡಿದ್ದನ್ನಲಾಗಿದೆ.
ಮಮ್ಮೀಕೃತ ದೇಹದ ಕೆಳಗೆ 14 ನೇ ಶತಮಾನದ ಬಟ್ಟೆಯ ಸುರಳಿಯೂ  ಸಿಕ್ಕಿದೆ. ಚೀನಿ ಭಾಷೆಯಲ್ಲಿರುವ ಮಾಹಿತಿಯ ಸುರಳಿ ಭಿಕ್ಷುವಿನ ಬಗ್ಗೆ ಹೆಚ್ಚಿನ ಮಾಹಿತಿಯ ಸುಳಿವನ್ನು ಹೊಂದಿರಬಹುದು. ಆರಂಭದಲ್ಲಿ ಸನ್ಯಾಸಿಯ ಸಂಸ್ಕರಿಸಿದ ದೇಹವನ್ನೇ ಪೂಜಿಸುತ್ತಿದ್ದಿರಬಹುದು. ಆ ಬಳಿಕ ಅಂದರೆ 14 ನೇ ಶತಮಾನದಲ್ಲಿ ಅದನ್ನು ಪ್ರತಿಮೆ ರೂಪಕ್ಕೆ ರೂಪಾಂತರಿಸಿರಬಹುದು ಎಂದು ವಾನ್ ವಿಲ್‌ಸ್ಟೆರ್ನ್ ಹೇಳಿದ್ದಾರೆ.
ಇತ್ತೀಚೆಗೆ ಮಂಗೋಲಿಯಾದಲ್ಲಿ ಸಿಕ್ಕ 200 ವರ್ಷಗಳ ಹಳೆಯ ಬೌದ್ಧ ಭಿಕ್ಷುವಿನ ಪದ್ಮಾಸನದಲ್ಲಿದ್ದ  ಧ್ಯಾನಸ್ಥ ದೇಹ ಪ್ರಚಾರಕ್ಕೆ ಬಂದ ಬಳಿಕ 1000 ವರ್ಷಗಳ ಹಳೆಯ ಮಮ್ಮೀಕೃತ ಭಿಕ್ಷುವಿನ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಗಿದೆ.
ಧ್ಯಾನದಲ್ಲೇ ಮರಣ:
ಬೌದ್ಧರಲ್ಲಿ ಅದರಲ್ಲೂ ಟಿಬೆಟ್ ಚೀನಾದ ಬೌದ್ಧರು ಮರು ಜನ್ಮದಲ್ಲಿ ನಂಬಿಕೆ ಹೊಂದಿದ್ದಾರೆ. ಸತ್ತ ನಂತರ ಆತ್ಮದ ಎಲ್ಲಿಗೆ ಹೋಗುತ್ತದೆ ಮತ್ತು ಅದು ಮರಳಿ ಹೇಗೆ ಜನ್ಮ ಪಡೆಯುತ್ತದೆ ಎಂಬುದರ ಕುರಿತು ಟಿಬೆಟಿಯನ್ನರು ಪುಸ್ತಕ ಬರೆದಿದ್ದಾರೆ. ಆ ಪೈಕಿ ‘ದಿ ಟಿಬೆಟಿಯನ್ ಬುಕ್ ಆಫ್ ಡೆಡ್’ ಪ್ರಖ್ಯಾತಿ ಪಡೆದಿದೆ. ಹಿಂದೆ ಧ್ಯಾನಸ್ಥ ಸ್ಥಿತಿಯಲ್ಲೇ ಬೌದ್ಧ ಭಿಕ್ಷುಗಳು ದೇಹ ತೊರೆಯುತ್ತಿದ್ದರು. ಧ್ಯಾನದ ವಿಶಿಷ್ಟ ತಂತ್ರದಿಂದ ದೇಹವನ್ನು ಕೆಡದಂತೆ ಉಳಿಸಿಕೊಳ್ಳುವ ಕಲೆಯೂ ಅವರಿಗೆ ಕರಗತವಾಗಿತ್ತು. ಆದರೆ, ಅನುಯಾಯಿಗಳು ಗುರುಗಳು ಮರಳಿ ಬದುಕಬಹುದು ಎಂದು ಮಮ್ಮಿ ರೂಪಕ್ಕೆ ಪರಿವರ್ತಿಸಿರಲಿಕ್ಕೂ ಸಾಕು. ಕೆಡದ ದೇಹವನ್ನು ಪ್ರತಿಮೆರೂಪಕ್ಕೆ ರೂಪಾಂತರಿಸಿ ಪೂಜಿಸುವ ಪದ್ಧತಿಯೂ ಇದ್ದಿರಬಹುದು ಎಂದು ತಜ್ಞರು ಊಹಿಸಿದ್ದಾರೆ.
(Photo by abc news)

ಸೋಮವಾರ, ಅಕ್ಟೋಬರ್ 19, 2015

ಮನಸ್ಸಿನಿಂದ ನಿರೋಧಕ ಶಕ್ತಿ ನಿಯಂತ್ರಣ  * ಚಳಿಯಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳೋ ತಂತ್ರ  * ರೋಗ ನಿರೋಧಕವನ್ನೂ ನಿಯಂತ್ರಿಸಬಹುದು

ಮನೋಸಿದ್ಧಿಗಿದೆ ಅಪಾರ ಶಕ್ತಿ !
ಟಿಬೆಟ್ ನಿಮಗೆ ಗೊತ್ತಿರಲೇಬೇಕಲ್ಲ. ಹಿಮಾಚ್ಛಾದಿತ ಪರ್ವತ ಶ್ರೇಣಿಗಳಲ್ಲಿರುವ ನಾಡು. ಅಲ್ಲಿರುವ ಬೌದ್ಧ ಸನ್ಯಾಸಿಗಳು ಮತ್ತು ಯೋಗಿಗಳು ಯೋಗಕ್ರಿಯೆಯ  ಕೆಲ ವಿಶೇಷ ತಂತ್ರಗಳನ್ನು ಕರಗತ ಮಾಡಿಕೊಂಡಿರುತ್ತಾರೆ, ಅದುವೇ  ತುಮ್ಮೋ ತಂತ್ರ. ಅಂದರೆ ಎಲುಬು ಕೊರೆಯುವ 
ಚಳಿಯಲ್ಲೂ ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ತಂತ್ರವದು. ಬಟ್ಟೆ ಇಲ್ಲದೇ ಕೊರೆಯುವ ಚಳಿಯಲ್ಲಿ  ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಾರೆ, ಹಿಮಪಾತದ ಸಂದರ್ಭದಲ್ಲೂ ನಿರಾಯಾಸವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಇದು ಹೇಗೆ ಸಾಧ್ಯ? 
ಈ ಪ್ರಶ್ನೆಯನ್ನು ಹುಡುಕಿಕೊಂಡು ಹೊರಟ ವಿಜ್ಞಾನಿಗಳಿಗೆ ವಿಸ್ಮಯಕಾರಿ ಸಂಗತಿ ಅರಿವಿಗೆ ಬಂದಿತು . ಅದೇನೆಂದರೆ, ಮನುಷ್ಯ ಗಟ್ಟಿ ಮನಸ್ಸು ಮಾಡಿದರೆ, ದೇಹದಲ್ಲಿನ ತನ್ನ ನಿರೋಧಕ ಪ್ರತಿಕ್ರಿಯೆ (ಇಮ್ಯೂನ್ ರೆಸ್ಪಾನ್ಸಸ್) ಶಕ್ತಿಯನ್ನು ಪ್ರಜ್ಞಾಪೂರ್ವಕವಾಗಿಯೇ  ನಿಯಂತ್ರಿಸಿಕೊಳ್ಳಬಹುದು. ಚಳಿಯಲ್ಲಿ ದೇಹವನ್ನು ಬಾಹ್ಯ ವಸ್ತುಗಳ ನೆರವಿಲ್ಲದೆ ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಬಿರು ಬೇಸಿಗೆಯಲ್ಲಿ  ದೇಹವನ್ನು ತಂಪಾಗಿಯೂ ಇಟ್ಟುಕೊಳ್ಳಬಹುದು.
ಸಂಶೋಧಕರು ದೇಹದೊಳಗಿನ  ಈ ವಿಚಿತ್ರ, ಸ್ವತಂತ್ರ  ವರ್ತನೆಯನ್ನು ಅಧ್ಯಯನ ಮಾಡಲು ಮುಂದಾಗಿದ್ದು ವಿಮ್ ಹಾಫ್ ವಿಧಾನದ ಮೂಲಕ. ಯಾವುದೇ ವ್ಯಕ್ತಿ ನಿರೋಧಕ ಪ್ರತಿಕ್ರಿಯಾತ್ಮಕ ಶಕ್ತಿಯ ತಂತ್ರವನ್ನು ಮನಸ್ಸು ಮಾಡಿದರೆ ಕರಗತ ಮಾಡಿಕೊಳ್ಳಬಹುದು ಎನ್ನುತ್ತದೆ ವಿಮ್ ಹಾಫ್ ವಿಧಾನ.

ಏನಿದು ವಿಮ್ ಹಾಫ್ ವಿಧಾನ?
ವಿಮ್ ಹಾಫ್ ಡಚ್ ಮೂಲದ ವ್ಯಕ್ತಿ.
 ಈತ ಎಂತದ್ದೇ ಚಳಿಯನ್ನು ಸಹಿಸಿಕೊಳ್ಳುವ ವಿಶಿಷ್ಟ  ಶಕ್ತಿ ಹೊಂದಿರುವ ವ್ಯಕ್ತಿ. ಈ ಕಾರಣಕ್ಕೇ ಈತ ವಿಶ್ವ ದಾಖಲೆ ಮಾಡಿದ್ದಾನೆ. ‘ದಿ ಐಸ್ ಮ್ಯಾನ್’ ಎಂಬ ಅಡ್ಡ ಹೆಸರಿನಿಂದಲೂ ಕರೆಯುತ್ತಾರೆ.
ನೆದರ್ಲೆಂಡಿನ ನಿಜ್ಮೆಗೆನ್‌ನಲ್ಲಿರುವ ರಾಡ್ಬೌಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ಮಥಿಜಿಸ್ ಕಾಕ್ಸ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಿದರು. ಈ ಅಧ್ಯಯನದ ವಿಧಾನ ಟಿಬೆಟ್ಟಿನ  ತುಮ್ಮೊ ತಂತ್ರಕ್ಕೆ ಸಮಾನಾಂತರವಾಗಿತ್ತು. ಇದರಲ್ಲಿ ಮೂರನೇ ಕಣ್ಣಿನ ಧ್ಯಾನ ಕ್ರಮ, ಪ್ರಾಣಾಯಾಮವೂ ಒಳಗೊಂಡಿತ್ತು. ವಿಜ್ಞಾನಿಗಳು 12 ಮಂದಿಗೆ ಈ ಸಂಬಂಧ ತರಬೇತಿ ನೀಡಿದರು . ಆಂತರಿಕ ಬಿಸಿಯ ಬೇಗೆಯನ್ನು ನಿವಾರಿಸುವ ಕ್ರಮ ಹೇಳಿಕೊಡಲಾಯಿತು.
ಅಧ್ಯಯನದ ಚೌಕಟ್ಟಿನಲ್ಲಿ ಒಟ್ಟು 24 ಮಂದಿ ಒಳಪಟ್ಟಿದ್ದರು. ಆ ಪೈಕಿ 12 ಮಂದಿ ವಿಮ್ ಹಾಫ್ ತಂತ್ರವನ್ನು ತರಬೇತಿ ಪಡೆದವರು. ಉಳಿದ 12 ಮಂದಿಗೆ ಅದರ ಸುಳಿವೇ ಇರಲಿಲ್ಲ. ಈ ಎರಡೂ ವರ್ಗಗಳಿಗೆ ವಿಜ್ಞಾನಿಗಳು ಫ್ಲೂ ರೀತಿಯ ಲಕ್ಷಣಗಳನ್ನು ಪ್ರಚೋದಿಸುವ ಗುಣವುಳ್ಳ ಬ್ಯಾಕ್ಟಿರಿಯಾಗಳನ್ನು ದೇಹಕ್ಕೆ ಸೇರಿಸಿದರು. ಇದರ ಫಲಿತಾಂಶ ಸ್ವಾರಸ್ಯಕರವಾಗಿತ್ತು. ಹಾಫ್ ವಿಧಾನದ ತರಬೇತಿ ಪಡೆದವರಲ್ಲಿ ಫ್ಲೂ ರೀತಿಯ ಲಕ್ಷಣಗಳು ತೀರಾ ಗೌಣವೆನಿಸುವ ಮಟ್ಟದಲ್ಲಿತ್ತು. ತರಬೇತಿ ಪಡೆಯದವರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಷ್ಟೇ ಅಲ್ಲ ತರಬೇತಿ ದೇಹದಲ್ಲಿ ಜ್ವಲನಕಾರಿ ಸೃಷ್ಟಿ ಮಾಡುವ ಪ್ರೋಟಿನ್ ಅಲ್ಪ ಪ್ರಮಾಣದಲ್ಲಿ ಸೃಷ್ಟಿಯಾಗಿತ್ತು. (ಅಧಿಕ ಪ್ರಮಾಣದ ಇಂಟರ್‌ಲ್ಯೂಕಿನ್-10 ಜ್ವಲನಕಾರಿ ವಿರುದ್ಧ ಹೋರಾಡುವ ಪ್ರೋಟಿನ್). 
ಇಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ಸಂಗತಿ ಎಂದರೆ, ಸ್ವಾಯತ್ತ ನರಮಂಡಲ ವ್ಯವಸ್ಥೆ ಮತ್ತು ಅಂತರ್ಜನ್ಯ ನಿರೋಧಕ ವ್ಯವಸ್ಥೆಗಳೆರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬುದಾಗಿತ್ತು. ಹೊಸ ಅಧ್ಯಯನದಿಂದ ವ್ಯಕ್ತವಾಗಿರುವ ಸಂಗತಿ ಎಂದರೆ, ಈ ವಿಶೇಷ ತಂತ್ರಗಳನ್ನು ತರಬೇತಿ ಮೂಲಕ  ಕರಗತ ಮಾಡಿಕೊಂಡರೆ ಅನುವೇದಿಕ ನರಮಂಡಲ ವ್ಯವಸ್ಥೆ ಮತ್ತು ನಿರೋಧಕ ವ್ಯವಸ್ಥೆಗಳರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಬಹುದು.
ಆದರೆ, ಸಂಪ್ರದಾಯಬದ್ಧ ನರವ್ಯೂಹ ತಜ್ಞರು  ಮತ್ತು ನಿರೋಧಕಜ್ಞರು ಈ ಅಧ್ಯಯವನ್ನು ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಅವರಲ್ಲಿ ತಾತ್ವಿಕ ಸಂದೇಹಗಳಿದ್ದವು . ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಒಂದಕ್ಕೊಂದು ತಲೆಬುಡ ಇಲ್ಲದ  ಸಂಬಂಧ ಕಲ್ಪಿಸಲು ಇದೊಂದು ಅದ್ಭುತ ಅಧ್ಯಯನ ಎಂದೂ ವ್ಯಂಗ್ಯವಾಡಿದ್ದಾರೆ. 
 ಸುಪ್ತ ಪ್ರಜ್ಞೆ ಪ್ರಭಾವ
ಅಷ್ಟಕ್ಕೂ ನಿರೋಧ ವ್ಯವಸ್ಥೆಯನ್ನು ಮನಸ್ಸು ನಿಯಂತ್ರಿಸುವ ಬಗ್ಗೆ ಇದೊಂದೇ ಪ್ರಥಮ ಅಧ್ಯಯನವಲ್ಲ. ಆಸ್ಟ್ರೇಲಿಯಾ ವಿಜ್ಞಾನಿಗಳು ಇಂತಹದ್ದೊಂದು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಅಲರ್ಜಿಕ್ ಪ್ರತಿಕ್ರಿಯೆಯ ಪ್ರಮಾಣದ ಮೇಲೆ ಸುಪ್ತ ಪ್ರಜ್ಞೆ ಪ್ರಭಾವ ಬೀರುವ ಸಾಮರ್ಥ್ಯ ಪಡೆದಿದೆ ಎಂಬ ನಿರ್ಣಯಕ್ಕೆ ಬಂದಿದ್ದರು.
ಇವೆರಡೂ ಸಂಶೋಧನೆಗಳಿಂದ ವ್ಯಕ್ತವಾಗುವ ವಿಚಾರವೆಂದರೆ, ನಿರೋಧಕ ವ್ಯವಸ್ಥೆಯನ್ನು ಪ್ರಜ್ಞಾಪೂರ್ವಕವಾಗಿ ಹಲವು ವಿಧಾನಗಳಿಂದ ಪ್ರಭಾವ ಬೀರಬಹುದಾಗಿದೆ.  ಹೀಗಾಗಿ ನೀವು ಮನಸ್ಸು ಮಾಡಿದರೆ ನಿಮ್ಮ ಆರೋಗ್ಯ ಮತ್ತು ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ಜೀವನದ ಧನಾತ್ಮಕ  ಅಂಶಗಳ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸಿ, ನೀವು ಆನಂದವಾಗಿ, ಐಶ್ವರ್ಯಯುತರಾಗಿದ್ದೀರಿ ಎಂದು ದೃಢವಾಗಿ ಭಾವಿಸಿ, ಆ ಕುರಿತು ಪ್ರತಿ ದಿನವೂ ಧ್ಯಾನಿಸಿ. ಕೆಲವೇ ದಿನಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇದು ಆರೋಗ್ಯ ಮಾತ್ರವಲ್ಲ ಇಡೀ ಜೀವನವನ್ನೇ ಬದಲಾಯಿಸಬಲ್ಲದು.
ಧ್ಯಾನದಲ್ಲಿ ಇಂತಹ  ಸ್ಥಿತಿ ತಲುಪಲು ಸಾಧ್ಯ. ಇದರಲ್ಲಿ ಗಿಮಿಕ್ ಇಲ್ಲ !