ಶುಕ್ರವಾರ, ಅಕ್ಟೋಬರ್ 23, 2015

ಆನಂದ- ದುಃಖ  ಯಾವುದು ಬೇಕು?
ಒಬ್ಬ ಸೂಫಿ ಸಂತನಿದ್ದ. ಆತ ಜೀವವಿಡೀ ನಗುತ್ತಾ, ಸಂತೋಷದಿಂದಲೇ ಕಳೆದಿದ್ದ. ಅವನೆಂದೂ ಅಸಂತೋಷಗೊಂಡಿದ್ದನ್ನು ಆ ಊರಿನಲ್ಲಿ ಯಾರೂ ಆವರೆಗೆ ನೋಡಿರಲಿಲ್ಲ. ಸದಾ ನಗು- ನಗುತ್ತಲೇ ಇರುತ್ತಿದ್ದ; ಅದರಲ್ಲೇ ಆನಂದ ಕಂಡುಕೊಂಡಿದ್ದ. ಹೀಗೆ ಇರುತ್ತಾ ಹಣ್ಣು ಹಣ್ಣು ಮುದುಕನಾಗಿ ಸಾವಿನ ಸನಿಹಕ್ಕೆ ತಲುಪಿದ. ಇನ್ನೇನು ಪ್ರಾಣ ಪಕ್ಷಿ ಹಾರಿಹೋಗಬೇಕು ಎನ್ನುವ ಸಂದರ್ಭದಲ್ಲೂ ಅವನ ಮುಖದಲ್ಲಿನ ನಗು ಮಾಸಿರಲಿಲ್ಲ. ಸಾವನ್ನು ನಗು- ನಗುತ್ತಲೇ ಸ್ವೀಕರಿಸಲು ಸಿದ್ಧನಾಗಿದ್ದ. ಇವೆಲ್ಲ ಸಂತನ ಶಿಷ್ಯರಿಗೆ ಅಚ್ಚರಿ ಎನಿಸಿತು. ಇದೇನಿದು ಸಾವಿನ ಮನೆಯ ಹೊಸ್ತಿಲಲ್ಲಿದ್ದರೂ ಆನಂದ ಮತ್ತು ಸಂತಸದಲ್ಲಿದ್ದಾನಲ್ಲ ಎಂದೆನಿಸಿತು. ಗುರು ಸಾವಿನ ಸಮೀಪವಾಗಿರುವುದು ಕಂಡು ದುಃಖಿತರಾಗಿದ್ದ ಶಿಷ್ಯರು ಹೀಗೆಂದು ಪ್ರಶ್ನಿಸಿದರು, ಅಲ್ಲ ಗುರುಗಳೇ, ನೀವೊಂದು ರೀತಿ ಒಗಟಾಗಿದ್ದೀರಿ. ನೀವೀಗ ಸಾಯುತ್ತಿದ್ದೀರಿ, ಆದರೂ ನಗುತ್ತಿದ್ದೀರಲ್ಲ? ಅಂತಹದ್ದೇನಿದೆ ನಗಲು. ನಾವೆಲ್ಲ ದುಃಖಿತರಾಗಿದ್ದೇವೆ. ನಿಮಗೇನು ಅನ್ನಿಸುತ್ತಿಲ್ಲವೆ? ಜೀವನದಲ್ಲಿ ಒಮ್ಮೆಯೂ ಬೇಸರ ಆಗಿಲ್ಲವೆ, ಯಾಕೆ ದುಃಖಿರಾಗಿಲ್ಲ ಎನ್ನೋದನ್ನು ಕೇಳಬೇಕೆಂದು ಸಾಕಷ್ಟು ಸಲ ಅನ್ನಿಸಿತ್ತು. ಈಗ ನೀವು ಸಾವಿನ ಸಮ್ಮುಖದಲ್ಲಿದ್ದೀರಿ, ಇಂತಹ  ಸಂದರ್ಭದಲ್ಲಿ ಯಾರಿಗಾದರೂ ದುಃಖ ಆಗಲೇಬೇಕು. ಆದರೆ, ನೀವು ನಗುತ್ತಲೇ ಇದ್ದೀರಿ. ಇವೆಲ್ಲ ಹೇಗೆ ಸಾಧ್ಯವಾಯ್ತು? 
ಈ ಪ್ರಶ್ನೆಗಳ ಸುರಿಮಳೆಗೆ ಮುದುಕ ಉತ್ತರ ಕೊಟ್ಟ, ಇದು ಸರಳ, ನಾನು ಯುವಕನಾಗಿದ್ದಾಗ ನನ್ನ ಗುರುಗಳ ಬಳಿಗೆ ಹೋಗಿದ್ದೆ.  ನನಗೆ 17 ರ ಪ್ರಾಯ ಅಂತ ಕಾಣುತ್ತೆ, ಜೀವನ ಬಹಳ ಬೇಸರ ಹುಟ್ಟಿಸಿತ್ತು. ನನ್ನ ಗುರುಗಳು ಜೀವನದ ಸಂಧ್ಯಾಕಾಲದಲ್ಲಿದ್ದರು. ಅವರು ಒಂದು ಮರದ ಕೆಳಗೆ ಕುಳಿತ್ತಿದ್ದರು. ಯಾವುದೇ ಕಾರಣ, ಪ್ರೇರಣೆ ಇಲ್ಲದೆ ನಗುತ್ತಲಿದ್ದರು. ಅಲ್ಲಿ ಏನೂ ಘಟಿಸಿರಲಿಲ್ಲ. ಯಾರೊಬ್ಬರೂ ಇರಲಿಲ್ಲ, ನಗುವಂತಹ ಸಂಗತಿಗೆ ಸ್ಫೂರ್ತಿ ನೀಡುವಂತಹದ್ದೂ ಏನೂ ಇರಲಿಲ್ಲ ಆದರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರು. ನನಗೆ ತಡೆಯಲಾಗಲಿಲ್ಲ ಕೇಳಿಯೇ ಬಿಟ್ಟೆ, ‘ನಿಮಗೇನಾಗಿದೆ, ಹುಚ್ಚು- ಗಿಚ್ಚು ಹಿಡಿದಿದೆಯೇ?’. ಅದಕ್ಕೆ ಅವರು ಉತ್ತರಿಸಿದರು, ಒಂದೊಮ್ಮೆ ನಿನ್ನ ಹಾಗೆಯೇ ನಾನೂ ಬೇಸರ, ದುಃಖಭರಿತನಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯಿತು ಅದೇನೆಂದರೆ, ಇದು ನನ್ನ ಜೀವನ ಮತ್ತು ನನ್ನ ಆಯ್ಕೆ, ನಾನೇಕೆ ಬೇಸರದಿಂದ ಇರಬೇಕು? ಅವತ್ತಿನಿಂದ ಪ್ರತಿ ಬೆಳಿಗ್ಗೆ ನಾನು ಎದ್ದ ತಕ್ಷಣ ಕಣ್ಣು ಬಿಡುವುದಕ್ಕೆ ಮುಂಚೆ ನನ್ನಷ್ಟಕ್ಕೆ ನಾನು ‘‘ಅಬ್ದುಲ್ಲಾ’’ ಎಂದು ಹೇಳಿಕೊಳ್ಳುತ್ತೇನೆ. ಅದು ಆ ಮುದುಕನ ಹೆಸರಾಗಿತ್ತು. ಹಾಗೆ ಹೇಳಿಕೊಳ್ಳುವಾಗ ನಿನಗೇನು ಬೇಕು? ದುಃಖವೇ? ಆನಂದವೇ? ಇವೆರಡರಲ್ಲಿ ನೀನ್ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀಯ? ಸಹಜವಾಗಿ ನಾನು ಆನಂದವಾಗಿರುವುದನ್ನು ಆಯ್ಕೆ  ಮಾಡಿಕೊಳ್ಳಲಾರಂಭಿಸಿದೆ ಎಂದರು. ನೀನು ಹೇಗಿರಬೇಕು ಎಂಬುದು ನಿನ್ನ ಆಯ್ಕೆ, ಪ್ರಯತ್ನಿಸು. ನಿದ್ದೆಯಿಂದ ಎದ್ದಾಕ್ಷಣ ಸ್ವಯಂ ಅರಿವಿನ ಅನುಭವ ಆದೊಡನೆ, ನಿನ್ನಲ್ಲೇ ಕೇಳಿಕೋ, ‘ಅಬ್ದುಲ್ಲಾ, ಇನ್ನೊಂದು ದಿನ, ನಿನ್ನ ಕಲ್ಪನೆ ಏನು? ನೀನು ದುಃಖವನ್ನು ಆಯ್ದುಕೊಳ್ಳುತ್ತೀಯೋ ಇಲ್ಲ ಆನಂದವನ್ನೊ?’. ಯಾರು ತಾನೆ ದುಃಖವನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ? ಏತಕ್ಕಾಗಿ? ದುಃಖದಲ್ಲೂ ಆನಂದದ ಸ್ಥಿತಿ ಅನುಭವಿಸಲು ಸಾಧ್ಯವಾಗದಿದ್ದಲ್ಲಿ ಅಸ್ವಾಭಾವಿಕ ಎನಿಸುತ್ತದೆ. ಆಗಲೂ ಆನಂದವನ್ನೇ ಆಯ್ಕೆ ಮಾಡುತ್ತೀರಿಯೇ ಹೊರತು ದುಃಖವನ್ನಲ್ಲ.
ಬದುಕಿನ ಮಹಾಗುರು ಶ್ರೀಕೃಷ್ಣ
-----------
ಕೃಷ್ಣ ಅಂದ್ರೆ ಖುಷಿ
----------
ಕ್ಕಳು ಮತ್ತು ಯುವ ಜನತೆ, ಮಹಿಳೆಯರೆನ್ನದೆ ಎಲ್ಲರನ್ನೂ ಗಾಢವಾಗಿ ಪ್ರಭಾವಿಸುವ ವ್ಯಕ್ತಿತ್ವ ಎಂದರೆ ಶ್ರೀಕೃಷ್ಣನದ್ದು. ಆತನ ಬಾಲ್ಯಲೀಲೆ, ಯೌವ್ವನದ ಸಾಹಸಕ್ಕೆ  ಮರುಳಾಗದವರು ಯಾರು? ಕೃಷ್ಣನ ಬಾಲ್ಯ, ಯೌವ್ವನ, ಆನಂತರದ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಅನುಕರಣೀಯ. ಸಾಹಸ, ಸ್ನೇಹ, ಶಿಕ್ಷಣ, ಸ್ಫೂರ್ತಿಯುತ ಜೀವನ ಪ್ರೀತಿ, ಮಹಾಭಾರತದ ಸಂದರ್ಭದ ರಾಜನೀತಿ, ಗೀತೆಯ ಬೋಧನೆಗಳೆಲ್ಲ ಇಂದಿಗೂ ಅನುಕರಣೀಯ. ಕೃಷ್ಣನಿಂದ ಸ್ಫೂರ್ತಿ ಪಡೆದವರು, ಪಡೆಯುತ್ತಿರುವವರು ಭಾರತೀಯರು ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲೂ ಇದ್ದಾರೆ. ಎಲ್ಲರನ್ನೂ ಸೆಳೆದುಕೊಳ್ಳುವ ವ್ಯಕ್ತಿತ್ವ ಆತನದ್ದು. ದೈವತ್ವವನ್ನು ಹೊರತುಪಡಿಸಿ ನೋಡಿದರೂ, ಸಾಧಾರಣ ಮಾನವನಾಗಿ ಆತ ಜಗತ್ತಿಗೆ ತೋರಿಸಿದ ದಾರಿದೀಪ ಯುಗಯುಗ  ಕಳೆದರೂ ಬೆಳಗುತ್ತಲೇ ಇರುವುದು. 

ಕೃಷ್ಣ ಅಂದ್ರೆ ಸ್ಫೂರ್ತಿ

ಶ್ರೀಕೃಷ್ಣನ ಅವತಾರವೇ ಒಂದು ಸ್ಫೂರ್ತಿ. ಧರೆಯಲ್ಲಿ ರಾಕ್ಷಸಿ ವ್ಯಕ್ತಿತ್ವ, ಗುಣಗಳ ವಿಜೃಂಭಣೆಯ ಕಾಲಘಟ್ಟದಲ್ಲಿ ಕೃಷ್ಣನ ಜನನ. ಈತನ ಜನನದ ಸಮಾಚಾರವೇ ಮಾವ ಕಂಸನಲ್ಲಿ ನಡುಕ ಹುಟ್ಟಿಸಿತ್ತು. ಎಳೆವೆಯಲ್ಲೇ ಹೊಸಕಿ ಹಾಕಲು ಬಹಳಷ್ಟು ಪ್ರಯತ್ನಪಟ್ಟ. ಆದರೆ ಅದು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಬೃಂದಾವನ, ಗೋಕುಲ ಎಲ್ಲೆಲ್ಲಿ ಕೃಷ್ಣ ಇದ್ದನೋ ಅಲ್ಲಿ ಸ್ಫೂರ್ತಿಯ ಚಿಲುಮೆ ಚಿಮ್ಮುತ್ತಿತ್ತು. ಕಂಸ ಮತ್ತು ಆತನ ಸಹಚರರ ಭೀತಿಯ ವಾತಾವರಣದ ಮಧ್ಯೆಯೂ ಕೃಷ್ಣನ ನಿರ್ಭೀತಿ, ನ್ಯಾಯಪರತೆ, ದುಷ್ಟರಿಗೆ ಶಿಕ್ಷೆ ಇವೆಲ್ಲಕ್ಕಿಂತ ಮಿಗಿಲಾಗಿ ಚೇತೋಹಾರಿ ಬದುಕು ಮನಕುಲಕ್ಕೆ ಸ್ಫೂರ್ತಿ. ಜೀವನದ ಉದ್ದಕ್ಕೂ ಆತ ಹಲವರಿಗೆ ಸ್ಫೂರ್ತಿಯಾಗುತ್ತಲೇ ನಡೆದ. ವಿರೋಧಿಗಳೆನಿಸಿಕೊಂಡವರು ಕೂಡ ಕೃಷ್ಣನನ್ನು ಮನದಲ್ಲೇ ನಮಿಸುವಷ್ಟು, ಭಜಿಸುವಷ್ಟು ಸ್ಫೂರ್ತಿಯನ್ನು ನೀಡಿದ್ದ. ಪಾಂಡವರಲ್ಲದೆ, ಭೀಷ್ಮ, ದ್ರೋಣ, ಸಂಜಯ ಮುಂತಾದವರು ವಿರೋಧ ಪಾಳೆಯದಲ್ಲಿದ್ದರೂ, ಅವರ ಮನಸ್ಸಿನಲ್ಲಿ ಕೃಷ್ಣನೇ ಮೂಡುತ್ತಿದ್ದ. ಬೃಂದಾವನವೆಂಬ ಇಡೀ ಹಳ್ಳಿಯ ಜನರನ್ನು ಪ್ರಭಾವಿಸಿದ್ದ. ಮಕ್ಕಳು -ದೊಡ್ಡವರು, ಹೆಂಗಸರು- ಗಂಡಸರು ಎಂಬ ತಾರತಮ್ಯವಿರಲಿಲ್ಲ. ನಡೆ, ನುಡಿ, ಆಚಾರ, ಆಚರಣೆ ಎಲ್ಲದರಲ್ಲೂ ಉನ್ನತ ಮೌಲ್ಯ ತುಂಬಿರುತ್ತಿತ್ತು. ದೋಷಗಳಿಗೆ ಎಡೆಯೇ ಇರುತ್ತಿರಲಿಲ್ಲ. ಆ ಸ್ಫೂರ್ತಿ, ಆದರ್ಶ ಅಂದಿಗೆ ಮಾತ್ರವಲ್ಲ ಇಂದಿನ ಪೀಳಿಗೆಗೂ ಸಕಾಲಿಕ. ಇಂದಿಗೂ ಪ್ರತಿ ಅಮ್ಮ ತನ್ನ ಮಗನನ್ನು ಒಂದಲ್ಲ ಒಂದು ಬಾರಿ ಕೃಷ್ಣನಿಗೆ ಹೋಲಿಸುತ್ತಾಳೆ. ಮಗನಲ್ಲಿ ಕೃಷ್ಣನನ್ನು ಕಾಣುವ ತಾಯಿಯ ಸಂಭ್ರಮ ಯಾವ ಸ್ಫೂರ್ತಿಗೂ ಕಡಿಮೆಯಲ್ಲ. 

ಗೆಳೆಯ ಅಂದ್ರೆ ಹೀಗಿರ‌್ಬೇಕು

ಶ್ರೀಕೃಷ್ಣನ ಬಾಲ್ಯದ ಕಥೆ ಬಹಳ ರೋಚಕ. ಕೃಷ್ಣನ ಕಥೆಯ ಮುಂದೆ ಹ್ಯಾರಿಪಾಟರ್ ಕಥೆಯೂ ಸಪ್ಪೆ. ಈ ಕಥೆಗಳಲ್ಲಿ ವಿಶೇಷವಾಗಿ ಗೆಳೆತನದ ಎಳೆಯೂ ಬರುತ್ತದೆ. ಬಾಲ್ಯದಲ್ಲಂತೂ ಸ್ನೇಹಿತರ ಹಿಂಡನ್ನು ಕಟ್ಟಿಕೊಂಡೇ ಓಡಾಡುವ ಕೃಷ್ಣ ಮುಂದೆ ದ್ವಾರಕಾಧೀಶನಾದ ಬಳಿಕವೂ ಬಾಲ್ಯದ ಗೆಳೆಯರನ್ನು ಮರೆಯುವುದಿಲ್ಲ. ಅದಕ್ಕೆ ಇಂದಿಗೂ ಜನಪ್ರಿಯವಾಗಿರುವ ಕಥೆ ಎಂದರೆ ಕೃಷ್ಣ- ಕುಚೇಲರದ್ದು. ಸ್ನೇಹಿತರೆಂದರೆ ಹೇಗಿರಬೇಕು? ಕೃಷ್ಣ- ಕುಚೇಲರ ಹಾಗಿರಬೇಕು ಎಂಬ ಮಾತೇ ಬೆಳೆದು ಬಂದಿದೆ. ಕುಚೇಲನನ್ನು ಸುದಾಮ ಎಂದೂ ಕರೆಯುತ್ತಾರೆ. ಶ್ರೀಕೃಷ್ಣ ಗುರು ಸಾಂದೀಪಿನಿಯ ಬಳಿ ವಿದ್ಯೆ ಕಲಿಯುವಾಗ ಸುದಾಮ ಆತನ ಸಹಪಾಠಿ. ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ದೊಡ್ಡ ರಾಜನ ಮಗ ಆಗಲಿ, ಬಡವರ ಮಕ್ಕಳಾಗಲಿ ಗುರುಕುಲದಲ್ಲಿಯೇ ಕಲಿಯಬೇಕಿತ್ತು. ಬಡವ- ಧನಿಕ ಎಂಬ ವ್ಯತ್ಯಾಸ ಇರುತ್ತಿರಲಿಲ್ಲ. ಆಟ, ಊಟ, ಪಾಠದ ಜೊತೆಗೆ ಸಮಾನ ಗುಣ, ಸಮಾನ ಅಭಿರುಚಿಯಿಂದ ಕೃಷ್ಣ-ಸುದಾಮರ ಮಧ್ಯೆ ಗಾಢ ಸ್ನೇಹ. ಗುರುಕುಲ ವಾಸ ಮುಗಿಸಿ ಹೊರಡುವಾಗ ‘ಬದುಕಿರುವವರೆಗೂ ಸ್ನೇಹ ಮರೆಯದೇ ಇರೋಣ’ ಎಂಬುದಾಗಿ ಮಾತನಾಡಿಕೊಂಡರು. ಸುದಾಮ ಘನ ಪಂಡಿತನಾದರೂ ಕಡು ಬಡತನದ ಜೀವನ  ಸಾಗಿಸುತ್ತಿದ್ದ. ಒಮ್ಮೆ ಹೆಂಡತಿ ‘ಕೃಷ್ಣ ಅಷ್ಟು ಗೆಳೆಯ ಎನ್ನುತ್ತೀರಲ್ಲ, ನಮ್ಮ ಕಷ್ಟ ನಿವಾರಿಸಿಕೊಳ್ಳಲು ಆತನ ಬಳಿ ಹೋಗಿ’ ಎಂದು ತಾಕೀತು ಮಾಡುತ್ತಾಳೆ. ಗೆಳೆಯನ ಬಳಿ ಹೋಗುವಾಗ ಬರಿಗೈಲಿ ಹೋಗಬಾರದು ಎಂದು ಒಂದು ಹಿಡಿ ಅವಲಕ್ಕಿಯನ್ನು ಅವಳು ಕಳಿಸುತ್ತಾಳೆ. ಹರುಕು ಪಂಚೆಯಲ್ಲೇ ಅವಲಕ್ಕಿ  ಕಟ್ಟಿಕೊಂಡು ಬರುತ್ತಾನೆ ಸುದಾಮ. ಹಾಗೆ ಬಂದ ಗೆಳೆಯನನ್ನು ದೂರದಿಂದಲೇ ಗುರುತಿಸಿ, ರುಕ್ಮಿಣಿಯೊಂದಿಗೆ ಒಡಗೂಡಿ ಬಂದು ಆದರಿಸಿ, ಬರಮಾಡಿಕೊಂಡು ಸತ್ಕರಿಸುತ್ತಾನೆ ಕೃಷ್ಣ. ಗೆಳೆಯನನ್ನು ತಬ್ಬಿಕೊಂಡು ಕುಣಿದಾಡುತ್ತಾನೆ. ಈ ಕಥೆ ಇಂದಿಗೂ ಜನಪ್ರಿಯ.

ಕೃಷ್ಣನೆಂಬ ಗುರು

ಯಾರು ಅರಿವನ್ನು ಮೂಡಿಸುತ್ತಾರೋ ಅವರೇ ಗುರು. ಕೃಷ್ಣ ಮನುಕುಲಕ್ಕೆ ಬೆಳಕು ನೀಡಿದ ಮಹಾನ್ ಗುರು. ಮಾನವನ ಆಂತರಿಕ ಮತ್ತು ಬಾಹ್ಯದ ದೋಷವೆಂಬ ಮಲಿನವನ್ನು ತೊಳೆದು ಸ್ವಚ್ಛಗೊಳಿಸಲು ಗೀತಾಮೃತಕ್ಕಿಂತ ಮಿಗಿಲಾದ ಬೇರೊಂದು ಟಾನಿಕ್ ಬೇಕಿಲ್ಲ. ಅದೇ ಕಾರಣಕ್ಕೆ, ಕೆಲವು ಶಿಕ್ಷಣ ಸಂಸ್ಥೆಗಳು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಂಥ ದಿಗ್ಗಜ ಸಂಸ್ಥೆಗಳೂ ಭಗವದ್ಗೀತೆಯನ್ನು ಪಠ್ಯವಾಗಿ ಬೋಧಿಸುತ್ತಿವೆ. ಮಾನಸಿಕ ತಾಕಲಾಟಗಳಿಂದ ಹೊರಬರಲು ಅತ್ಯುತ್ತಮ ಮನೋವೈಜ್ಞಾನಿಕ ವಿಶ್ಲೇಷಣೆಯುಳ್ಳ ಗ್ರಂಥವೂ ಇದಾಗಿದೆ. ಹೀಗಾಗಿ ಐನ್‌ಸ್ಟೀನ್‌ರಂತಹ ಮಹಾ ವಿಜ್ಞಾನಿಗಳೂ ಗೀತೆಗೆ ಶರಣೆಂದಿದ್ದಾರೆ. 


ಜೀವನ ಸಂದೇಶಕ್ಕೆ ಸಾಟಿಯಿಲ್ಲ:

ಜೀವನದ ಕುರಿತು ಕೃಷ್ಣ ನೀಡಿರುವ ಸಂದೇಶವನ್ನು  ಪ್ರತಿ ನಿತ್ಯ ಓದುವುದರಿಂದ ಎಲ್ಲಾ ಬಗೆಯ ಆತಂಕ, ಸಂಕಷ್ಟ ಮತ್ತು ಗೊಂದಲಗಳಿಂದ ಮುಕ್ತಿ ಪಡೆಯಬಹುದು. ಜೀವನವನ್ನು ಪ್ರೀತಿಸಬಹುದು. ನಿರ್ಭಯರಾಗಿ ಬದುಕಬಹುದು.

ಜೀವನ ಎಂದರೇನು?

------------
ಜೀವನವೆಂದರೆ ಪ್ರತಿಭೆ- ಅದನ್ನು ಪರಿಪೂರ್ಣಗೊಳಿಸು
ಜೀವನವೆಂದರೆ ಉಡುಗೊರೆ- ಅದನ್ನು ಸ್ವೀಕರಿಸು
ಜೀವನವೆಂದರೆ ಸಾಹಸ-  ಮುನ್ನುಗ್ಗಿ ಸಾಧಿಸು
ಜೀವನವೆಂದರೆ ದುಃಖ- ಅದನ್ನು ನಿವಾರಿಸಿಕೊಳ್ಳು
ಜೀವನವೆಂದರೆ ದುರಂತ- ಅದನ್ನು ಎದುರಿಸು
ಜೀವನವೆಂದರೆ ಕರ್ತವ್ಯ- ಅದನ್ನು ನಿರ್ವಹಿಸು
ಜೀವನವೆಂಬುದು ಆಟ- ಅದನ್ನು ಚೆನ್ನಾಗಿ ಆಡು
ಜೀವನವೆಂಬುದು ರಹಸ್ಯ- ಅದನ್ನು ಅನಾವರಣಗೊಳಿಸು
ಜೀವನವೆಂಬುದು ಅವಕಾಶ- ಅದನ್ನು ಬಳಸಿಕೊಳ್ಳು
ಜೀವನವೆಂಬುದು ಪಯಣ- ಅದನ್ನು ಪೂರ್ಣಗೊಳಿಸು
ಜೀವನವೆಂಬುದು ವಾಗ್ದಾನ- ಅದನ್ನು ಈಡೇರಿಸು
ಜೀವನವೆಂಬುದು ಪ್ರೀತಿ- ಅದನ್ನು ಅನುಭವಿಸು
ಜೀವನವೆಂಬುದು ಸ್ಫೂರ್ತಿ- ಅದನ್ನು ಅರಿತುಕೋ
ಜೀವನವೆಂಬುದು ಸಂಕಷ್ಟ- ಅದರ ವಿರುದ್ಧ ಹೋರಾಡು
ಜೀವನವೆಂಬುದು ಒಗಟು- ಅದನ್ನು ಬಿಡಿಸು
ಜೀವನ ಎಂಬುದು ಗುರಿ- ಅದನ್ನು ಸಾಧಿಸು.

ಬುಧವಾರ, ಅಕ್ಟೋಬರ್ 21, 2015

ಸಾವಿರ ವರ್ಷದ ಧ್ಯಾನಸ್ಥ ಸ್ಥಿತಿಯ ಗುರುವಿನ ‘ಮಮ್ಮಿ’
ಪ್ರತಿಮೆಯೊಳಗೆ ಬೌದ್ಧ ಗುರು
ಸಾವಿರ ವರ್ಷಗಳ ಹಿಂದಿನ ಬೌದ್ಧ ಸನ್ಯಾಸಿ ಪ್ರತಿಮೆ ರೂಪಕ್ಕಿಳಿದ ರೋಚಕ ಕಥೆ ಇದು.  ಗಾಢ ಮತ್ತು ಉನ್ನತ ಧ್ಯಾನಸ್ಥ ಸ್ಥಿತಿಯ ಸನ್ಯಾಸಿ ಬುದ್ಧನ ವಿಗ್ರಹದಲ್ಲಿ ಸೇರಿಕೊಂಡಿದ್ದಾದರೂ  ಹೇಗೆ? ಪ್ರತಿಮೆ ರೂಪದಲ್ಲಿ ಮಮ್ಮಿಕರಣಗೊಂಡಿದ್ದಾದರೂ ಹೇಗೆ? ಇಂತಹ ಹಲವು ಪ್ರಶ್ನೆಗೆಳಿಗೆ ಈಗ ಉತ್ತರ ಸಿಕ್ಕಿದೆ. ಆಧುನಿಕ ಸಿ.ಟಿ ಸ್ಕ್ಯಾನ್  ಬೌದ್ಧ ಸನ್ಯಾಸಿಯ ಮಮ್ಮಿಯ ಹಲವು ರಹಸ್ಯಗಳನ್ನು ಅನಾವರಣಗೊಳಿಸಿದೆ.
ಈ ಪ್ರತಿಮೆ ಚೀನಾದ್ದು. ಹಾಲೆಂಡ್, ಜರ್ಮನಿ, ಸ್ವಿರ್ಜಲೆಂಡ್ ಮತ್ತು ಹಂಗೆರಿ ದೇಶಗಳಲ್ಲಿ ಜಂಟಿ ಪ್ರದರ್ಶನಕ್ಕೆಂದು ಒಯ್ಯಲಾಗಿತ್ತು. 
ಮಮ್ಮಿ ಎಂದು ಗೊತ್ತಾಗುತ್ತಿದ್ದಂತೆ ತಜ್ಞರು ಸಿ.ಟಿ  ಸ್ಕ್ಯಾನ್  ಮತ್ತು ಎಂಡೋಸ್ಕೊಪಿಗೊಳಪಡಿಸಿದರು. ಈ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ, ಇದರ  ದರ್ಶನಕ್ಕಾಗಿ  ಜನ ಮುಗಿ ಬಿದ್ದರು . 2014 ರಲ್ಲಿ  ಹಾಲೆಂಡ್‌ನ ಡೆರೆಂಟ್ ಮ್ಯೂಸಿಯಂನಲ್ಲಿ ಏಳು ತಿಂಗಳ ಪ್ರದರ್ಶನದ ಬಳಿಕ ತಜ್ಞರು ಪ್ರತಿಮೆಯೊಳಗೆ ಹುದುಗಿದ್ದ  ಸನ್ಯಾಸಿಯ ದೇಹದೊಳಗಿನ ಅಂಗಾಂಗಗಳನ್ನು  ವಿಶ್ಲೇಷಣೆಗೊಳಪಡಿಸಲು ನಿರ್ಧರಿಸಿದರು.
ಸಿ.ಟಿ  ಸ್ಕ್ಯಾನ್  ಮಾಡಿದಾಗ ತಜ್ಞರಿಗೆ ಅಚ್ಚರಿ ಕಾದಿತ್ತು. ದೇಹದೊಳಗೆ ಹಲವು ಅಂಗಗಳೇ ಇರಲ್ಲಿಲ್ಲ .
ಅಷ್ಟಕ್ಕೂ  ಸ್ಕ್ಯಾನ್ ಗೆ ಮುಂದಾಗಿದ್ದು ಬೇರೆಯೇ  ಕಾರಣಕ್ಕೆ  ಪ್ರತಿಮೆಯ ಮಾಲಿಕ ಅದರ ಆಳೆತ್ತರದ ಪ್ರತಿಮೆ ಪುನರ್ ನಿರ್ಮಿಸಲು ನಿರ್ಧರಿಸಿದ್ದ.   
ಇದರ ಒಳ ರಚನೆ ಪುನರ್ ಸೃಷ್ಟಿಗೆ  3ಡಿ  ಸ್ಕ್ಯಾನ್   ಮಾಡಬೇಕಾಯಿತು. ಆಗ ಮಮ್ಮಿಯೊಳಗಿನ ಮಾನವಾಕೃತಿ ಇರುವುದು ಬೆಳಕಿಗೆ ಬಂದಿತು. 1996 ರಲ್ಲಿ ಪ್ರತಿಮೆಯನ್ನು ಚೀನಾದಿಂದ ತಂದಾಗ ಅದು ಮಮ್ಮಿ ಎಂಬುದು ಯಾರಿಗೂ  ಗೊತ್ತಿರಲಿಲ್ಲ. ಹಲವು ವರ್ಷಗಳ ಬಳಿಕ ತಜ್ಞರು ಪ್ರತಿಮೆಯನ್ನು ಸಂರಕ್ಷಿಸುವ ಸಂದರ್ಭದಲ್ಲಿ ಮಮ್ಮಿ ಇರಬಹುದು ಎಂಬುದಾಗಿ ಊಹಿಸಿದ್ದರು. ಪರೀಕ್ಷೆಗೆ ಹೋಗಿರಲಿಲ್ಲ . ಸಿಟಿ ಸ್ಕ್ಯಾನ್  ಬಳಿಕ ಹಾಲೆಂಡ್‌ನ ಮಿಯಾಂಡೆರ್ ಮೆಡಿಕಲ್ ಸೆಂಟರ್‌ನಲ್ಲಿ ಕಳೆದ ವರ್ಷ ಮಮ್ಮಿಯೊಳಗೆ ಪುಟಾಣಿ ಕ್ಯಾಮೆರಾ ತೂರಿಸಿ ಎಂಡೋಸ್ಕೋಪಿ ಪರೀಕ್ಷೆಯನ್ನೂ ನಡೆಸಲಾಯಿತು. ಶ್ವಾಸಕೋಶದ ಭಾಗಕ್ಕೆ ಕ್ಯಾಮೆರಾ ತೆರಳಿ ಚಿತ್ರ ಬಿತ್ತರಿಸಿದಾಗ ಅದನ್ನು ಶ್ವಾಸಕೋಶದ ಅಂಗಾಂಶ ಇರಬಹುದೆಂದು ಭಾವಿಸಲಾಗಿತ್ತು. ಆದರೆ, ಅದು ಅಂಗಾಂಶ ಆಗಿರದೇ, ಚೀನಿ ಬರಹವನ್ನು ಒಳಗೊಂಡ ಸಣ್ಣ ಕಾಗದದ ತುಣುಕುಗಳಾಗಿದ್ದವು.  
ಈ ಪ್ರತಿಮೆಯಲ್ಲಿನ ಸನ್ಯಾಸಿಯ ದೇಹದ ಕುರಿತು ಇನ್ನಷ್ಟು ತನಿಖೆಗಳು ನಡೆಯುತ್ತಿವೆ. ಡಿಎನ್‌ಎ ಪರೀಕ್ಷೆಯೂ ನಡೆಯಲಿದೆ.  2013 ರಲ್ಲಿ ಜರ್ಮನಿಯ ಮನ್ನಿಹೆಮ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಸ್ಕ್ಯಾನ್ ಮಾಡಲಾಗಿತ್ತು.  ಮಮ್ಮೀಕೃತ ಬೌದ್ಧ ಸನ್ಯಾಸಿಯ ದೇಹ ಚೀನಿ ಧ್ಯಾನ ಶಾಲೆಯ ಗುರುವಾಗಿದ್ದ, ಲಿಕ್ವಾನ್ ನದ್ದು ಎಂದು ಭಾವಿಸಲಾಗಿದೆ. ಈತ  ಕ್ರಿ.ಶ 1100 ರ ಅವಧಿಯಲ್ಲಿ ಗಾಢ ಧ್ಯಾನದ ಸ್ಥಿತಿಯಲ್ಲೇ ದೇಹ ತ್ಯಾಗ ಮಾಡಿದ್ದನ್ನಲಾಗಿದೆ.
ಮಮ್ಮೀಕೃತ ದೇಹದ ಕೆಳಗೆ 14 ನೇ ಶತಮಾನದ ಬಟ್ಟೆಯ ಸುರಳಿಯೂ  ಸಿಕ್ಕಿದೆ. ಚೀನಿ ಭಾಷೆಯಲ್ಲಿರುವ ಮಾಹಿತಿಯ ಸುರಳಿ ಭಿಕ್ಷುವಿನ ಬಗ್ಗೆ ಹೆಚ್ಚಿನ ಮಾಹಿತಿಯ ಸುಳಿವನ್ನು ಹೊಂದಿರಬಹುದು. ಆರಂಭದಲ್ಲಿ ಸನ್ಯಾಸಿಯ ಸಂಸ್ಕರಿಸಿದ ದೇಹವನ್ನೇ ಪೂಜಿಸುತ್ತಿದ್ದಿರಬಹುದು. ಆ ಬಳಿಕ ಅಂದರೆ 14 ನೇ ಶತಮಾನದಲ್ಲಿ ಅದನ್ನು ಪ್ರತಿಮೆ ರೂಪಕ್ಕೆ ರೂಪಾಂತರಿಸಿರಬಹುದು ಎಂದು ವಾನ್ ವಿಲ್‌ಸ್ಟೆರ್ನ್ ಹೇಳಿದ್ದಾರೆ.
ಇತ್ತೀಚೆಗೆ ಮಂಗೋಲಿಯಾದಲ್ಲಿ ಸಿಕ್ಕ 200 ವರ್ಷಗಳ ಹಳೆಯ ಬೌದ್ಧ ಭಿಕ್ಷುವಿನ ಪದ್ಮಾಸನದಲ್ಲಿದ್ದ  ಧ್ಯಾನಸ್ಥ ದೇಹ ಪ್ರಚಾರಕ್ಕೆ ಬಂದ ಬಳಿಕ 1000 ವರ್ಷಗಳ ಹಳೆಯ ಮಮ್ಮೀಕೃತ ಭಿಕ್ಷುವಿನ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಗಿದೆ.
ಧ್ಯಾನದಲ್ಲೇ ಮರಣ:
ಬೌದ್ಧರಲ್ಲಿ ಅದರಲ್ಲೂ ಟಿಬೆಟ್ ಚೀನಾದ ಬೌದ್ಧರು ಮರು ಜನ್ಮದಲ್ಲಿ ನಂಬಿಕೆ ಹೊಂದಿದ್ದಾರೆ. ಸತ್ತ ನಂತರ ಆತ್ಮದ ಎಲ್ಲಿಗೆ ಹೋಗುತ್ತದೆ ಮತ್ತು ಅದು ಮರಳಿ ಹೇಗೆ ಜನ್ಮ ಪಡೆಯುತ್ತದೆ ಎಂಬುದರ ಕುರಿತು ಟಿಬೆಟಿಯನ್ನರು ಪುಸ್ತಕ ಬರೆದಿದ್ದಾರೆ. ಆ ಪೈಕಿ ‘ದಿ ಟಿಬೆಟಿಯನ್ ಬುಕ್ ಆಫ್ ಡೆಡ್’ ಪ್ರಖ್ಯಾತಿ ಪಡೆದಿದೆ. ಹಿಂದೆ ಧ್ಯಾನಸ್ಥ ಸ್ಥಿತಿಯಲ್ಲೇ ಬೌದ್ಧ ಭಿಕ್ಷುಗಳು ದೇಹ ತೊರೆಯುತ್ತಿದ್ದರು. ಧ್ಯಾನದ ವಿಶಿಷ್ಟ ತಂತ್ರದಿಂದ ದೇಹವನ್ನು ಕೆಡದಂತೆ ಉಳಿಸಿಕೊಳ್ಳುವ ಕಲೆಯೂ ಅವರಿಗೆ ಕರಗತವಾಗಿತ್ತು. ಆದರೆ, ಅನುಯಾಯಿಗಳು ಗುರುಗಳು ಮರಳಿ ಬದುಕಬಹುದು ಎಂದು ಮಮ್ಮಿ ರೂಪಕ್ಕೆ ಪರಿವರ್ತಿಸಿರಲಿಕ್ಕೂ ಸಾಕು. ಕೆಡದ ದೇಹವನ್ನು ಪ್ರತಿಮೆರೂಪಕ್ಕೆ ರೂಪಾಂತರಿಸಿ ಪೂಜಿಸುವ ಪದ್ಧತಿಯೂ ಇದ್ದಿರಬಹುದು ಎಂದು ತಜ್ಞರು ಊಹಿಸಿದ್ದಾರೆ.
(Photo by abc news)

ಸೋಮವಾರ, ಅಕ್ಟೋಬರ್ 19, 2015

ಮನಸ್ಸಿನಿಂದ ನಿರೋಧಕ ಶಕ್ತಿ ನಿಯಂತ್ರಣ  * ಚಳಿಯಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳೋ ತಂತ್ರ  * ರೋಗ ನಿರೋಧಕವನ್ನೂ ನಿಯಂತ್ರಿಸಬಹುದು

ಮನೋಸಿದ್ಧಿಗಿದೆ ಅಪಾರ ಶಕ್ತಿ !
ಟಿಬೆಟ್ ನಿಮಗೆ ಗೊತ್ತಿರಲೇಬೇಕಲ್ಲ. ಹಿಮಾಚ್ಛಾದಿತ ಪರ್ವತ ಶ್ರೇಣಿಗಳಲ್ಲಿರುವ ನಾಡು. ಅಲ್ಲಿರುವ ಬೌದ್ಧ ಸನ್ಯಾಸಿಗಳು ಮತ್ತು ಯೋಗಿಗಳು ಯೋಗಕ್ರಿಯೆಯ  ಕೆಲ ವಿಶೇಷ ತಂತ್ರಗಳನ್ನು ಕರಗತ ಮಾಡಿಕೊಂಡಿರುತ್ತಾರೆ, ಅದುವೇ  ತುಮ್ಮೋ ತಂತ್ರ. ಅಂದರೆ ಎಲುಬು ಕೊರೆಯುವ 
ಚಳಿಯಲ್ಲೂ ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ತಂತ್ರವದು. ಬಟ್ಟೆ ಇಲ್ಲದೇ ಕೊರೆಯುವ ಚಳಿಯಲ್ಲಿ  ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಾರೆ, ಹಿಮಪಾತದ ಸಂದರ್ಭದಲ್ಲೂ ನಿರಾಯಾಸವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಇದು ಹೇಗೆ ಸಾಧ್ಯ? 
ಈ ಪ್ರಶ್ನೆಯನ್ನು ಹುಡುಕಿಕೊಂಡು ಹೊರಟ ವಿಜ್ಞಾನಿಗಳಿಗೆ ವಿಸ್ಮಯಕಾರಿ ಸಂಗತಿ ಅರಿವಿಗೆ ಬಂದಿತು . ಅದೇನೆಂದರೆ, ಮನುಷ್ಯ ಗಟ್ಟಿ ಮನಸ್ಸು ಮಾಡಿದರೆ, ದೇಹದಲ್ಲಿನ ತನ್ನ ನಿರೋಧಕ ಪ್ರತಿಕ್ರಿಯೆ (ಇಮ್ಯೂನ್ ರೆಸ್ಪಾನ್ಸಸ್) ಶಕ್ತಿಯನ್ನು ಪ್ರಜ್ಞಾಪೂರ್ವಕವಾಗಿಯೇ  ನಿಯಂತ್ರಿಸಿಕೊಳ್ಳಬಹುದು. ಚಳಿಯಲ್ಲಿ ದೇಹವನ್ನು ಬಾಹ್ಯ ವಸ್ತುಗಳ ನೆರವಿಲ್ಲದೆ ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಬಿರು ಬೇಸಿಗೆಯಲ್ಲಿ  ದೇಹವನ್ನು ತಂಪಾಗಿಯೂ ಇಟ್ಟುಕೊಳ್ಳಬಹುದು.
ಸಂಶೋಧಕರು ದೇಹದೊಳಗಿನ  ಈ ವಿಚಿತ್ರ, ಸ್ವತಂತ್ರ  ವರ್ತನೆಯನ್ನು ಅಧ್ಯಯನ ಮಾಡಲು ಮುಂದಾಗಿದ್ದು ವಿಮ್ ಹಾಫ್ ವಿಧಾನದ ಮೂಲಕ. ಯಾವುದೇ ವ್ಯಕ್ತಿ ನಿರೋಧಕ ಪ್ರತಿಕ್ರಿಯಾತ್ಮಕ ಶಕ್ತಿಯ ತಂತ್ರವನ್ನು ಮನಸ್ಸು ಮಾಡಿದರೆ ಕರಗತ ಮಾಡಿಕೊಳ್ಳಬಹುದು ಎನ್ನುತ್ತದೆ ವಿಮ್ ಹಾಫ್ ವಿಧಾನ.

ಏನಿದು ವಿಮ್ ಹಾಫ್ ವಿಧಾನ?
ವಿಮ್ ಹಾಫ್ ಡಚ್ ಮೂಲದ ವ್ಯಕ್ತಿ.
 ಈತ ಎಂತದ್ದೇ ಚಳಿಯನ್ನು ಸಹಿಸಿಕೊಳ್ಳುವ ವಿಶಿಷ್ಟ  ಶಕ್ತಿ ಹೊಂದಿರುವ ವ್ಯಕ್ತಿ. ಈ ಕಾರಣಕ್ಕೇ ಈತ ವಿಶ್ವ ದಾಖಲೆ ಮಾಡಿದ್ದಾನೆ. ‘ದಿ ಐಸ್ ಮ್ಯಾನ್’ ಎಂಬ ಅಡ್ಡ ಹೆಸರಿನಿಂದಲೂ ಕರೆಯುತ್ತಾರೆ.
ನೆದರ್ಲೆಂಡಿನ ನಿಜ್ಮೆಗೆನ್‌ನಲ್ಲಿರುವ ರಾಡ್ಬೌಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ಮಥಿಜಿಸ್ ಕಾಕ್ಸ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಿದರು. ಈ ಅಧ್ಯಯನದ ವಿಧಾನ ಟಿಬೆಟ್ಟಿನ  ತುಮ್ಮೊ ತಂತ್ರಕ್ಕೆ ಸಮಾನಾಂತರವಾಗಿತ್ತು. ಇದರಲ್ಲಿ ಮೂರನೇ ಕಣ್ಣಿನ ಧ್ಯಾನ ಕ್ರಮ, ಪ್ರಾಣಾಯಾಮವೂ ಒಳಗೊಂಡಿತ್ತು. ವಿಜ್ಞಾನಿಗಳು 12 ಮಂದಿಗೆ ಈ ಸಂಬಂಧ ತರಬೇತಿ ನೀಡಿದರು . ಆಂತರಿಕ ಬಿಸಿಯ ಬೇಗೆಯನ್ನು ನಿವಾರಿಸುವ ಕ್ರಮ ಹೇಳಿಕೊಡಲಾಯಿತು.
ಅಧ್ಯಯನದ ಚೌಕಟ್ಟಿನಲ್ಲಿ ಒಟ್ಟು 24 ಮಂದಿ ಒಳಪಟ್ಟಿದ್ದರು. ಆ ಪೈಕಿ 12 ಮಂದಿ ವಿಮ್ ಹಾಫ್ ತಂತ್ರವನ್ನು ತರಬೇತಿ ಪಡೆದವರು. ಉಳಿದ 12 ಮಂದಿಗೆ ಅದರ ಸುಳಿವೇ ಇರಲಿಲ್ಲ. ಈ ಎರಡೂ ವರ್ಗಗಳಿಗೆ ವಿಜ್ಞಾನಿಗಳು ಫ್ಲೂ ರೀತಿಯ ಲಕ್ಷಣಗಳನ್ನು ಪ್ರಚೋದಿಸುವ ಗುಣವುಳ್ಳ ಬ್ಯಾಕ್ಟಿರಿಯಾಗಳನ್ನು ದೇಹಕ್ಕೆ ಸೇರಿಸಿದರು. ಇದರ ಫಲಿತಾಂಶ ಸ್ವಾರಸ್ಯಕರವಾಗಿತ್ತು. ಹಾಫ್ ವಿಧಾನದ ತರಬೇತಿ ಪಡೆದವರಲ್ಲಿ ಫ್ಲೂ ರೀತಿಯ ಲಕ್ಷಣಗಳು ತೀರಾ ಗೌಣವೆನಿಸುವ ಮಟ್ಟದಲ್ಲಿತ್ತು. ತರಬೇತಿ ಪಡೆಯದವರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಷ್ಟೇ ಅಲ್ಲ ತರಬೇತಿ ದೇಹದಲ್ಲಿ ಜ್ವಲನಕಾರಿ ಸೃಷ್ಟಿ ಮಾಡುವ ಪ್ರೋಟಿನ್ ಅಲ್ಪ ಪ್ರಮಾಣದಲ್ಲಿ ಸೃಷ್ಟಿಯಾಗಿತ್ತು. (ಅಧಿಕ ಪ್ರಮಾಣದ ಇಂಟರ್‌ಲ್ಯೂಕಿನ್-10 ಜ್ವಲನಕಾರಿ ವಿರುದ್ಧ ಹೋರಾಡುವ ಪ್ರೋಟಿನ್). 
ಇಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ಸಂಗತಿ ಎಂದರೆ, ಸ್ವಾಯತ್ತ ನರಮಂಡಲ ವ್ಯವಸ್ಥೆ ಮತ್ತು ಅಂತರ್ಜನ್ಯ ನಿರೋಧಕ ವ್ಯವಸ್ಥೆಗಳೆರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬುದಾಗಿತ್ತು. ಹೊಸ ಅಧ್ಯಯನದಿಂದ ವ್ಯಕ್ತವಾಗಿರುವ ಸಂಗತಿ ಎಂದರೆ, ಈ ವಿಶೇಷ ತಂತ್ರಗಳನ್ನು ತರಬೇತಿ ಮೂಲಕ  ಕರಗತ ಮಾಡಿಕೊಂಡರೆ ಅನುವೇದಿಕ ನರಮಂಡಲ ವ್ಯವಸ್ಥೆ ಮತ್ತು ನಿರೋಧಕ ವ್ಯವಸ್ಥೆಗಳರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಬಹುದು.
ಆದರೆ, ಸಂಪ್ರದಾಯಬದ್ಧ ನರವ್ಯೂಹ ತಜ್ಞರು  ಮತ್ತು ನಿರೋಧಕಜ್ಞರು ಈ ಅಧ್ಯಯವನ್ನು ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಅವರಲ್ಲಿ ತಾತ್ವಿಕ ಸಂದೇಹಗಳಿದ್ದವು . ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಒಂದಕ್ಕೊಂದು ತಲೆಬುಡ ಇಲ್ಲದ  ಸಂಬಂಧ ಕಲ್ಪಿಸಲು ಇದೊಂದು ಅದ್ಭುತ ಅಧ್ಯಯನ ಎಂದೂ ವ್ಯಂಗ್ಯವಾಡಿದ್ದಾರೆ. 
 ಸುಪ್ತ ಪ್ರಜ್ಞೆ ಪ್ರಭಾವ
ಅಷ್ಟಕ್ಕೂ ನಿರೋಧ ವ್ಯವಸ್ಥೆಯನ್ನು ಮನಸ್ಸು ನಿಯಂತ್ರಿಸುವ ಬಗ್ಗೆ ಇದೊಂದೇ ಪ್ರಥಮ ಅಧ್ಯಯನವಲ್ಲ. ಆಸ್ಟ್ರೇಲಿಯಾ ವಿಜ್ಞಾನಿಗಳು ಇಂತಹದ್ದೊಂದು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಅಲರ್ಜಿಕ್ ಪ್ರತಿಕ್ರಿಯೆಯ ಪ್ರಮಾಣದ ಮೇಲೆ ಸುಪ್ತ ಪ್ರಜ್ಞೆ ಪ್ರಭಾವ ಬೀರುವ ಸಾಮರ್ಥ್ಯ ಪಡೆದಿದೆ ಎಂಬ ನಿರ್ಣಯಕ್ಕೆ ಬಂದಿದ್ದರು.
ಇವೆರಡೂ ಸಂಶೋಧನೆಗಳಿಂದ ವ್ಯಕ್ತವಾಗುವ ವಿಚಾರವೆಂದರೆ, ನಿರೋಧಕ ವ್ಯವಸ್ಥೆಯನ್ನು ಪ್ರಜ್ಞಾಪೂರ್ವಕವಾಗಿ ಹಲವು ವಿಧಾನಗಳಿಂದ ಪ್ರಭಾವ ಬೀರಬಹುದಾಗಿದೆ.  ಹೀಗಾಗಿ ನೀವು ಮನಸ್ಸು ಮಾಡಿದರೆ ನಿಮ್ಮ ಆರೋಗ್ಯ ಮತ್ತು ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ಜೀವನದ ಧನಾತ್ಮಕ  ಅಂಶಗಳ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸಿ, ನೀವು ಆನಂದವಾಗಿ, ಐಶ್ವರ್ಯಯುತರಾಗಿದ್ದೀರಿ ಎಂದು ದೃಢವಾಗಿ ಭಾವಿಸಿ, ಆ ಕುರಿತು ಪ್ರತಿ ದಿನವೂ ಧ್ಯಾನಿಸಿ. ಕೆಲವೇ ದಿನಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇದು ಆರೋಗ್ಯ ಮಾತ್ರವಲ್ಲ ಇಡೀ ಜೀವನವನ್ನೇ ಬದಲಾಯಿಸಬಲ್ಲದು.
ಧ್ಯಾನದಲ್ಲಿ ಇಂತಹ  ಸ್ಥಿತಿ ತಲುಪಲು ಸಾಧ್ಯ. ಇದರಲ್ಲಿ ಗಿಮಿಕ್ ಇಲ್ಲ !  

ಭಾನುವಾರ, ಅಕ್ಟೋಬರ್ 18, 2015


ದೇಹ ತೊರೆದ ಆ ಏಳು ದಿನಗಳು 
ಹುಟ್ಟಿನ ಮೊದಲು ಎಲ್ಲಿದ್ದೆವು ಮತ್ತು ಸಾವಿನ ಬಳಿಕ ಎಲ್ಲಿಗೆ ಹೋಗುತ್ತೇವೆ ಎಂಬ ಪ್ರಶ್ನೆಗಳ ಜತೆಗೆ, ಸ್ವರ್ಗ- ನರಕಗಳ ಬಗ್ಗೆಯೂ ಸಾಕಷ್ಟು ಜಿಜ್ಞಾಸೆ ನಡೆದೇ ಇದೆ. ಸ್ವರ್ಗ ಮತ್ತು ನರಕ ಎಂಬುದಿಲ್ಲ. ಎಲ್ಲವೂ ಇಲ್ಲೇ ಇದೆ, ಒಳ್ಳೆಯದನ್ನು ಮಾಡುವುದೇ ಸ್ವರ್ಗ, ಕೆಟ್ಟದ್ದು ನರಕ ಎನ್ನುವವರೂ ಇದ್ದಾರೆ.  ಸ್ವರ್ಗ ಅಥವಾ ಅಂತಹದ್ದೊಂದು ಲೋಕಕ್ಕೆ ಪಯಣಿಸಿ ಬಂದಿದ್ದಾಗಿ ಒಬ್ಬರು ಹೇಳಿಕೊಂಡಿದ್ದಾರೆ !  ಇಂತಹದ್ದೊಂದು ಅಚ್ಚರಿ ಸಂಗತಿ ಹೇಳಿರುವವರು ಒಬ್ಬರು ವಿಜ್ಞಾನಿ. ಸ್ವರ್ಗದಂತಹ ಲೋಕಕ್ಕೆ ಪಯಣಿಸಿದ್ದು ಮಾತ್ರವಲ್ಲ, ಅಲ್ಲಿ ಒಡಹುಟ್ಟಿದ ಸೋದರಿಯನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ರೀತಿ ಹೇಳಿರುವವರು ಹಾರ್ವರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಮೆದುಳು ಮತ್ತು ಮನೋ ವಿಜ್ಞಾನದ ಬಗ್ಗೆ ಪಾಠ ಮಾಡುವ ಡಾ ಎಬೆನ್ ಅಲೆಕ್ಸಾಂಡರ್. ಅವರು ತಮ್ಮ ದೇಹಾತೀತ ಅನುಭವ ಮತ್ತು ಸ್ವರ್ಗದಂತಹ ಬೇರೊಂದು ಲೋಕಕ್ಕೆ ಪಯಣಿಸಿದ ಬಗ್ಗೆ ತಮ್ಮ ಕೃತಿಯಲ್ಲಿ Proof of Heaven ದಲ್ಲಿ ವಿವರಿಸಿದ್ದಾರೆ.

ಎಬೆನ್ ಸ್ವರ್ಗಾರೋಹಣದ ಅನುಭವ ಸಂಕ್ಷಿಪ್ತ ವಿವರ ಹೀಗಿದೆ- 
‘ನಾನು ಬಾಲಕನಿದ್ದಾಗಲೇ ವೈದ್ಯರೊಬ್ಬರು ನನ್ನನ್ನು ದತ್ತು ತೆಗೆದುಕೊಂಡರು. ನನ್ನ ಕುಟುಂಬದ ಬಗ್ಗೆ ಏನೊಂದೂ ನೆನಪಿರಲಿಲ್ಲ. ನನಗೊಬ್ಬ ಒಡಹುಟ್ಟಿದ ತಂಗಿ ಇದ್ದಳು ಎಂಬುದೂ ಗೊತ್ತಿರಲಿಲ್ಲ. ನಾನು ಬೆಳೆದು  ದೊಡ್ಡವನಾದ ಬಳಿಕ ಆ ತಂಗಿಗಾಗಿ ಹುಡುಕಾಟ ನಡೆಸಿದಾಗ, ಆಕೆ ಮೃತಪಟ್ಟಿದ್ದು ಬೆಳಕಿಗೆ ಬಂತು. ಆದರೆ, ಆಕೆಯನ್ನು  ಸ್ವರ್ಗದಂತಹ ಲೋಕದಲ್ಲಿ ಭೇಟಿಯಾದೆ ಎಂದರೆ ನಂಬುತ್ತೀರಾ!'
ನಾನೊಬ್ಬ ವಿಜ್ಞಾನಿ. ನನ್ನ ಜೀವಮಾನದ ಬಹುತೇಕ ವರ್ಷಗಳು ಮಿದುಳಿನ ಚಟುವಟಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಾ ಬಂದಿದ್ದೇನೆ. ನನ್ನನ್ನು ದತ್ತು ತೆಗೆದುಕೊಂಡ ತಂದೆ ಕೂಡ ನ್ಯೂರೋ ಸರ್ಜನ್. ಅವರು ನಡೆದ ದಾರಿಯಲ್ಲಿ ನಾನು ಹೆಜ್ಜೆ ಇಟ್ಟು ನಾನೂ ನ್ಯೂರೋ ಸರ್ಜನ್ ಆದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಬ್ರೇನ್ ಸೈನ್ಸ್ ಅಂದರೆ ನರ ವಿಜ್ಞಾನದ ಬೋಧಕನಾಗಿಯೂ ಕಾರ್ಯ ನಿರ್ವಹಿಸಿದೆ. ಕ್ರೈಸ್ತನಾಗಿದ್ದ ನಾನು, ಯಾರಾದರೂ ಅಧ್ಯಾತ್ಮದ ಅನುಭವ ಆಗಿದೆ ಎಂದು ಹೇಳಿಕೊಳ್ಳಲು ಬಂದರೆ ನಂಬುತ್ತಿರಲಿಲ್ಲ. ಅಂತಹ ವ್ಯಕ್ತಿಗಳನ್ನು ಸಂಶಯದಿಂದ ನೋಡುತ್ತಿದ್ದೆ. ದೇಹಾತೀತ ಪಯಣದ ಅನುಭವ, ಅತಿಮಾನುಷರು ಅಥವಾ ದೇವಧೂತರನ್ನು ಕಂಡಿದ್ದೇನೆ ಎಂದು ಹೇಳಿದರೆ, ಅವರು ಮಿದುಳಿನ ಆಘಾತಕ್ಕೆ ಸಿಲುಕಿ ಭ್ರಾಂತಿಗೆ ಒಳಗಾಗಿದ್ದಾರೆ ಎಂಬ ನಿರ್ಣಯಕ್ಕೆ ಬರುತ್ತಿದ್ದೆ.
ಆದರೆ, ಆರು ವರ್ಷಗಳ ಹಿಂದೆ ನನ್ನ ತಥಾಕಥಿತ  ‘ವೈಜ್ಞಾನಿಕ ಮನೋಭಾವ’ ಬುಡಮೇಲಾಗುವ ಪ್ರಸಂಗ ನಡೆಯಿತು. ನಿಜಕ್ಕೂ ನಾಟಕೀಯ ಬೆಳವಣಿಗೆ ಎಂದೇ ಹೇಳಬೇಕು. ಒಂದು ದಿನ ಬೆಳಗ್ಗೆ ಏಳುವಾಗ ವಿಪರೀತ ತಲೆ ನೋವು. ಅದು ಎಷ್ಟು ತೀವ್ರವಾಗಿತ್ತು ಎಂದರೆ, ಕೆಲವೇ ಗಂಟೆಗಳಲ್ಲಿ ಕೋಮಾ ಸ್ಥಿತಿ ತಲುಪಿದ್ದೆ. ಮಿದುಳಿನ ನಿಯೋಕಾರ್ಟೆಕ್ಸ್ ಭಾಗ ಕಾರ್ಯ ಸ್ಥಗಿತಗೊಳಿಸಿತ್ತು. ಆಲೋಚನಾ ಪ್ರಕ್ರಿಯೆಯ ಮೂಲಕ ಮಾನವ ಎನಿಸಿಕೊಳ್ಳಲು ಮತ್ತು ಇತರ ಜೀವಿಗಳಿಗಿಂತ ಭಿನ್ನ ಎನಿಸಿಕೊಳ್ಳಲು  ನಿಯೋಕಾರ್ಟೆಕ್ಸ್ ಕಾರಣ.

ಈ ಸಂದರ್ಭದಲ್ಲಿ ನಾನು ವರ್ಜಿನಿಯಾದ ಲಿಂಚ್‌ಬರ್ಗ್ ಜನರಲ್ ಹಾಸ್ಪಿಟಲ್‌ನಲ್ಲಿ ವೈದ್ಯನಾಗಿದ್ದೆ. ಕೋಮಾಗೆ ಹೋದ ನನ್ನನ್ನು ತಕ್ಷಣವೇ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು. ಇದು ಮೆನಿಂಜೈಟಿಸ್ ಅಥವಾ ಮಿದುಳ್ಪೊರೆಯುರಿತಕ್ಕೆ ತುತ್ತಾಗಿದ್ದೇನೆ ಎಂದು ವೈದ್ಯರು ಅಭಿಪ್ರಾಯಪಟ್ಟರು. ಅತ್ಯಂತ ಅಪರೂಪದ ಬ್ಯಾಕ್ಟೀರಿಯಾ ‘ಇ ಕೊಲಿ’ ನನ್ನ ಬೆನ್ನುಹುರಿಯ ದ್ರವಕ್ಕೆ ಸೇರಿಕೊಂಡು ಅದು ಮಿದುಳನ್ನು ತಿಂದು ಹಾಕಲಾರಂಭಿಸಿದೆ. ಬದುಕುಳಿಯುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ವೈದ್ಯರು ಷರ ಬರೆದರು.
ಆಗ ಅತ್ಯಂತ ಗಾಢವಾದ ಕೋಮಾದಲ್ಲಿದ್ದೆ. ಒಂದು ರೀತಿಯಲ್ಲಿ ಸಸ್ಯಾವಸ್ಥೆಯಲ್ಲಿದ್ದೆ (vegetative state ). ಮಿದುಳು ಕಾರ್ಯವನ್ನು ನಿಲ್ಲಿಸಿತ್ತು. ಪ್ರಜ್ಞಾವಸ್ಥೆಯೂ ಇರಲಿಲ್ಲ ಎಂಬುದನ್ನು ಸ್ಕ್ಯಾನಿಂಗ್ ದಾಖಲಿಸಿತ್ತು. ಆದರೆ, ಆತ್ಮಸ್ಥ ನಾಗಿದ್ದೆ. ಇದು ನಾವು ಪ್ರತಿಪಾದಿಸಿಕೊಂಡು ಬಂದ ವಿಜ್ಞಾನದ ನಿಯಮಗಳಿಗೆ ಈ ಸಂಗತಿ ಹೊರತಾದುದಾಗಿತ್ತು.
 ಏಳು ದಿನಗಳ ಕಾಲ ನನ್ನಿಂದ ಯಾವ ಪ್ರತಿಕ್ರಿಯೆಯೂ ಇರಲಿಲ್ಲ. ನನ್ನ ಪ್ರಜ್ಞೆ (Consciousness ) ವಿವಿಧ ಲೋಕಗಳನ್ನು ದಾಟಿ ಪ್ರಯಾಣ ಬೆಳೆಸಿತ್ತು. ಈ ಲೋಕಗಳು ಒಂದಕ್ಕಿಂತ ಮತ್ತೊಂದು ಅತ್ಯದ್ಭುತವಾಗಿಯೂ, ಭೌತಿಕ ಜಗತ್ತಿಗಿಂತ ಭಿನ್ನವಾಗಿದ್ದವು. ಮೊದಲೆಲ್ಲ ಇಂತಹದ್ದನ್ನು ಯಾರಾದರೂ ಪ್ರಸ್ತಾಪಿಸಿದ್ದರೆ, ಇವೆಲ್ಲ ಬುರುಡೆ ಮತ್ತು ಅಸಂಭವ ಎಂದು ತಳ್ಳಿ ಹಾಕುತ್ತಿದೆ.

ಇತರ ಅನುಭವಕ್ಕಿಂತ ನನ್ನ ಅನುಭವ ಭಿನ್ನ. ನನ್ನ ಪ್ರಕರಣದಲ್ಲಿ ಮಿದುಳಿನ ಕಾರ್ಟೆಕ್ಸ್ ಸಂಪೂರ್ಣ ಸ್ಥಗಿತಗೊಂಡಿದ್ದ ಸ್ಥಿತಿಯಲ್ಲಿ ಸ್ವರ್ಗದಂತಹ ಆಯಾಮದಲ್ಲಿ ಪಯಣಿಸಿದ್ದು. ಮಿದುಳಿನ ಸ್ಥಗಿತಗೊಂಡ ಸ್ಥಿತಿಯನ್ನು ನಿರಂತರ ನಿಗಾವಹಿಸಿದ್ದು ವೈಜ್ಞಾನಿಕವಾಗಿ ದಾಖಲೆಯಾಗಿದೆ. ನನ್ನ ಅನುಭವನ್ನು ಒಪ್ಪಲು ವಿಜ್ಞಾನಿಗಳು ತಯಾರಿರಲಿಲ್ಲ.
ನಿಜಕ್ಕೂ ಆ  ದಿನಗಳು ಏನಾಗಿದ್ದವು? ಇದು ನಿಜಕ್ಕೂ ಕುತೂಹಲಕಾರಿ. ಕೋಮಾಗೆ ಜಾರಿದ ಬಳಿಕ ನಾನು ಅತ್ಯಂತ ಪುರಾತನ, ಆದಿ ಸ್ಥಿತಿಯಲ್ಲಿರುವ ಅನುಭವವಾಯಿತು. ಭೂಮಿಯಡಿ ಹುಗಿದು ಹೋದ ಅನುಭವ. ಅದು ನಮ್ಮ ಸಾಮಾನ್ಯ ಭೂಮಿಯಂತಿರಲಿಲ್ಲ ಎಂಬುದು ಅರಿವಿಗೆ ಬಂತು. ಅಲ್ಲಿ ನನ್ನನ್ನು ಹೊರತುಪಡಿಸಿ ಬೇರೇನೇನೋ ಅಸ್ತಿತ್ವದಲ್ಲಿ ಇದ್ದದ್ದು ಕಂಡಿತು ಮತ್ತು ಕೇಳಿತು. ಅವುಗಳಲ್ಲಿ ಕೆಲವು ಭಯ ಹುಟ್ಟಿಸುವಂತಹುದ್ದಾಗಿದ್ದರೆ ಮತ್ತೆ ಕೆಲವು ಪರಿಚಿತ ಎನಿಸುವಂತಹದ್ದಾಗಿದ್ದವು. ನಾನು ಈ ಆದಿಕಾಲದ ಸ್ಥಿತಿಯ ಮಬ್ಬಿನ ಭಾಗವಾಗಿದ್ದೇನೆ  ಎಂದೆನಿಸಿತು. ಇದೇನು ನರಕವೇ? ಎಂದು ಕೇಳಿಕೊಂಡೆ. ಇರದು ಅಂದುಕೊಂಡೆ. ಅಲ್ಲಿನ ವಾತಾವರಣ ಹಾಗಿರಲಿಲ್ಲ.

ಸಾಕಷ್ಟು ಸಮಯ ಹೀಗೆಯೇ ಕಳೆದಿತ್ತು. ಎಷ್ಟು ಸಮಯ ಕಳೆಯಿತು ಎಂಬುದು ಮಾತ್ರ ಗೊತ್ತಾಗಲಿಲ್ಲ. ಇದ್ದಕ್ಕಿದ್ದ ಹಾಗೆ, ಪ್ರಜ್ವಲಿಸುವ ಬೆಳಕು ಮೇಲಿನಿಂದ ಇಳಿದು ಬಂದಿತು. ನವಿರಾದ ಬಂಗಾರ ಮತ್ತು ಬೆಳ್ಳಿಯ ಬೆಳಕಿನ ನೂಲಿನಂತೆ ಪ್ರಕಾಶ ರೇಖೆಗಳನ್ನು ಅದು ಹೊರಸೂಸುತ್ತಿತ್ತು. ಅದು ಗೋಳದಂತಹ ಬೆಳಕಿನ ಅಸ್ತಿತ್ವ. ಸುಂದರವಾಗಿತ್ತು. ಮಧುರ ಸಂಗೀತವೂ ತೇಲಿ ಬಂದಿತ್ತು.

 ಇದಕ್ಕಿದ್ದಂತೆ ಬೆಳಕು ಸೀಳಿಕೊಂಡಿತು. ಹಾಗೆ ಸೀಳಿದ ಜಾಗದೊಳಗಿಂದ ಒಳಕ್ಕೆ ಪ್ರವೇಶ ಮಾಡಿದಂತೆ ಭಾಸವಾಯಿತು. ಇನ್ನು ಒಳಗೆ ಹೋದ ಬಳಿಕ ಹಚ್ಚ ಹಸಿರಿನಿಂದ ಕಂಗೊಳಿಸುವ ವಿಶಾಲ ಕಣಿವೆ ಕಾಣಿಸಿತು. ಸ್ಪಟಿಕದ ಕೊಳಕ್ಕೆ ಜಲಪಾತದ ಧಾರೆ, ಗುಲಾಬಿ ಮತ್ತು ಬಿಳಿ ಬಣ್ಣದ ಗೊಂಚಲಿನ ಗಿಡಗಳು. ಅದರ ಹಿಂದೆ ದಟ್ಟ ಕಪ್ಪು ಬಣ್ಣದ ಆಕಾಶ. ಇವೆಲ್ಲ ಅಸ್ಪಷ್ಟವಾಗಿರಲಿಲ್ಲ. ಎಲ್ಲವೂ ಸಜೀವ ಮತ್ತು  ನಿಚ್ಚಳವಾಗಿತ್ತು. ಕಣ್ಣು ಕೋರೈಸುವ ಸೂರ್ಯನ ಕಿರಣದಂತಹ ಕಿರಣಗಳು ತುಂಬಿತ್ತು. ಅಲ್ಲಿ ಮರಗಳು, ಹೊಲ, ಪ್ರಾಣಿ ಮತ್ತು ಮನುಷ್ಯರಿದ್ದರು. ನೀರು, ಹರಿಯುವ ನದಿ, ಮಳೆಯೂ ಇತ್ತು. ನೀರಿನಿಂದ ಮಂಜಿನ ಹಬೆ ಏಳುತ್ತಿತ್ತು. ಭೂಮಿ ಎಂದೂ ಇಷ್ಟು ಸುಂದರವಾಗಿದ್ದುದನ್ನು ನಾನು ನೋಡಿಲ್ಲ. ಇಲ್ಲಿ ಎಲ್ಲವೂ ಪರಸ್ಪರ ಬೇರೆ- ಬೇರೆ ಎಂಬ ಭಾವ ಇರಲಿಲ್ಲ. ಏಕಾತ್ಮಭಾವವಿತ್ತು. ಅನಂತತೆ (Infinity) ವ್ಯಾಪಕ. 
ಇದೇ ವೇಳೆಗೆ ಭೂಮಿಗೆ ಮರಳಿದ್ದೆ. ಕೋಮಾದಲ್ಲಿ ಏಳು ದಿನಗಳು ಆಗಿತ್ತು. ದೇಹದಲ್ಲಿ ಚೇತರಿಕೆ ಕಂಡಿರಲಿಲ್ಲ. ಜೀವ ರಕ್ಷಕ ಮುಂದುವರೆಸಬೇಕೆ ಬೇಡವೇ ಎಂಬ ಬಗ್ಗೆ ವೈದ್ಯರು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದ್ದರು. ಪ್ರಜ್ಞೆಯು ಮರಳಿತು. ಕಣ್ಣುಗಳನ್ನು ತೆರೆದೆ.
ಇವೆಲ್ಲ ಅನುಭವ ಆಧುನಿಕ ವೈದ್ಯಕೀಯ ಪರಿಭಾಷೆ ಮತ್ತು ಗ್ರಹಿಕೆಗೆ ಮೀರಿದ್ದು.

‘ಓಂ’ಕಾರದ ಕಂಪನ

ಗಸದ ಮೇಲೆ ಅನಂತ ವಿಶ್ವವಿತ್ತು. ಅದನ್ನು ಪ್ರಭಾವಲಯ ಎನ್ನಬಹುದು. ಅದರ ಮಧ್ಯಬಿಂದು ತಲುವರೆಗೆ ಆರೋಹಣಗೊಂಡೆ. ಅದು ಅತ್ಯಂತ ಆಳವಾದ ದಿವ್ಯ ದೈವಿಕ ಅನುಭವದ ತಾಣವಾಗಿತ್ತು. ಶಾಂತಿ ಮತ್ತು ಶುದ್ಧ ಪ್ರೀತಿಯ ಪ್ರವಾಹ ಅಲ್ಲಿತ್ತು. ಅಲ್ಲಿ ಅನಂತ ದಿವ್ಯ ಶಕ್ತಿಯ ಮುಖಾಮುಖಿ ಆಯಿತು. ಅಲ್ಲಿಂದ ಹೊಮ್ಮುತ್ತಿದ್ದ ಶಬ್ದ ಮತ್ತು ಕಂಪನ ‘ಓಂ’ ಎಂದಾಗಿತ್ತು. ಇಡೀ ಲೋಕವೇ ಆ ಕಂಪನ ಮತ್ತು  ನಾದದಿಂದ ಕೂಡಿತ್ತು. ಈ ಪಯಣದ ಉದ್ದಕ್ಕೂ ನನಗೊಬ್ಬಳು ಮಾರ್ಗದರ್ಶಿ ಇದ್ದಳು. ಆಕೆ ಅಪ್ರತಿಮ ಸೌಂದರ್ಯವತಿ. ಆ ಮಹಿಳೆಯನ್ನು ಹಿಂದೆಂದೂ ಕಂಡಿರಲಿಲ್ಲ. ಆಕೆಯ ಉಪಸ್ಥಿತಿಯಿಂದಲೇ ನನ್ನ ಹೃದಯ ಗುಣಮುಖವಾಗಿತ್ತು. ಇದರಿಂದ ನಾನು ಪರಿಪೂರ್ಣ ಎನಿಸಿತು. ಆ ಮುಖವನ್ನು ಮರೆಯಲು ಸಾಧ್ಯವಿಲ್ಲ. ಆಕೆ ಹೇಳಿದ ಮಾತುಗಳು ಇನ್ನೂ ಕಿವಿಯಲ್ಲಿ ಗುಂಯ್‌ಗುಡುತ್ತಿವೆ. 

''ಕೋಮಾದಿಂದ ಹೊರ ಬಂದು 4 ತಿಂಗಳ ಬಳಿಕ ಮೇಲ್‌ನಲ್ಲಿ ಒಂದು ಛಾಯಾಚಿತ್ರ ಬಂದಿತು.  ಸಂಬಂಧಿಕರೊಬ್ಬರು ಕಳುಹಿಸಿದ ಚಿತ್ರ. ತೀರಿ ಹೋಗಿದ್ದ ನನ್ನ ಒಡ ಹುಟ್ಟಿದ ತಂಗಿಯ ಚಿತ್ರ ಎಂಬ ಮಾಹಿತಿ ಅದರಲ್ಲಿತ್ತು. ಅಚ್ಚರಿಯ ಸಂಗತಿ ಎಂದರೆ, ಚಿತ್ರದಲ್ಲಿದ್ದ ಬಾಲಕಿಯ ಚಿತ್ರಕ್ಕೂ,  ಸ್ವರ್ಗದಂತಹ ಲೋಕದಲ್ಲಿ ಮಾರ್ಗದರ್ಶನ ಮಾಡಿದ ಸುಂದರ ರೆಕ್ಕೆಗಳನ್ನು ಹೊಂದಿದ್ದ ಯುವತಿಯ ಮುಖಕ್ಕೂ ಸಾಮ್ಯತೆ ಇತ್ತು. ಸೋದರಿಯೇ ಆಗಿದ್ದಳು.